ಚನ್ನಪಟ್ಟಣ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮಾತೇ ಇಲ್ಲ. ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜ್ಯದ ಹಲವೆಡೆ ಸ್ಪರ್ಧಿಸಲು ಒತ್ತಾಯ ಇದೆ. ನಾನು ಟೂರಿಂಗ್ ಟಾಕೀಸ್ ಅಲ್ಲ ಎಂದು ಪಕ್ಷದ ಅಭಿಮಾನಿಗಳಿಗೆ ಹೇಳಿದ್ದೇನೆ. ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಆದರೆ, ಚನ್ನಪಟ್ಟಣ ಹೊರತುಪಡಿಸಿ ಬೇರೆಲ್ಲೂ ಸ್ಪರ್ಧಿಸುವುದಿಲ್ಲ’ ಎಂದರು.
ಕಳೆದ ಬಾರಿ ಎರಡು ಕ್ಷೇತ್ರದಲ್ಲಿ ಸ್ಫರ್ಧಿಸಿದ್ದೆ. ಅದಕ್ಕೆ ಪಕ್ಷದ ಚನ್ನಪಟ್ಟಣ ಕಾರ್ಯಕರ್ತರೇ ಕಾರಣ. ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿನ ಕಾರ್ಯಕರ್ತರು ನೊಂದಿದ್ದರು. ಅವರ ಒತ್ತಡ ಮತ್ತು ನೋವಿಗೆ ಸ್ಪಂದಿಸುವ ಉದ್ದೇಶದಿಂದ ಎರಡು ಕಡೆ ಸ್ಪರ್ಧಿಸಬೇಕಾಯಿತು ಎಂದು ಸಮರ್ಥಿಸಿಕೊಂಡರು.