ಹಾಸನ: ‘ಹರಿಯಾಣದಲ್ಲಿ ದೇವಿಲಾಲ್ ಅವರ ಕುಟುಂಬವನ್ನು ಮುಗಿಸಿದಂತೆ, ರಾಜ್ಯದಲ್ಲಿ ಜೆಡಿಎಸ್ ಮುಗಿಸಲು ಹೊರಟಿದ್ದಾರೆ. 2023ರ ರಣರಂಗಕ್ಕೆ ಬನ್ನಿ, ಸರಿಯಾಗಿ ಉತ್ತರ ನೀಡುತ್ತೇವೆ’ ಎಂದು ಶಾಸಕ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.
‘ದೇವೇಗೌಡರಿಗೆ ವಯಸ್ಸಾಗಿದೆ, ಆರೋಗ್ಯ ಸರಿಯಿಲ್ಲ’ ಎಂಬ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದೇವೇಗೌಡರ ಆರೋಗ್ಯ ಸರಿ ಇಲ್ಲ. ಸಕ್ರಿಯ ರಾಜಕಾರಣ ಮಾಡಲು ಆಗುತ್ತಿಲ್ಲ ಎಂದು ಹೇಳಲು ಅವರು ಯಾರು’ ಎಂದು ಪ್ರಶ್ನಿಸಿದರು.
‘90 ವರ್ಷವಾಗಿದ್ದರೂ ದೇವೇಗೌಡರು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ. ರೈಲ್ವೆ ಇಲಾಖೆಯಿಂದ ರಾಜ್ಯಕ್ಕೆ ಅನ್ಯಾಯ ಆದಾಗ, ಖುದ್ದು ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಇದು ಸಕ್ರಿಯ ರಾಜಕಾರಣವಲ್ಲವೇ’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿ, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಬಿಜೆಪಿ ಮುಖಂಡರು ತಮ್ಮ ಕಚೇರಿಯಲ್ಲಿ ಕುಮಾರಸ್ವಾಮಿ ಫೋಟೊ ಹಾಕಬೇಕು’ ಎಂದು ತಿರುಗೇಟು ನೀಡಿದರು.