ಮೈಸೂರು: ‘ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಹೀಗಾಗಿ, ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ಕೋವಿಡ್ ಮಾರ್ಗಸೂಚಿ ಪಾಲಿಸಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶುಕ್ರವಾರ ಇಲ್ಲಿ ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಲ್ಕನೇ ಅಲೆ ತಪ್ಪಿಸಿಕೊಳ್ಳಬೇಕು, ಯಾವುದೇ ತೊಂದರೆ ಆಗಬಾರದು ಎಂದರೆ ಎಲ್ಲರೂ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜನಸಂದಣಿ ಇರುವೆಡೆ, ಕಾರ್ಯಕ್ರಮಗಳಲ್ಲಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ’ ಎಂದರು.
‘ಮಾಸ್ಕ್ ಕಡ್ಡಾಯ ಮಾಡಿ, ದಂಡ ವಿಧಿಸುವ ಪರಿಸ್ಥಿತಿ ರಾಜ್ಯದಲ್ಲಿ ಇನ್ನೂ ಬಂದಿಲ್ಲ. ಆದರೆ, ಕೋವಿಡ್ ಎಲ್ಲೋ ದೂರದಲ್ಲಿದೆ, ವಿದೇಶದಲ್ಲಿದೆ ಎಂಬ ನಿರ್ಲಕ್ಷ್ಯ ಬೇಡ’ ಎಂದು ಕಿವಿಮಾತು ಹೇಳಿದರು.
‘5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ನಿರ್ಧಾರ ಹೊರಬೀಳಲಿದೆ’ ಎಂದರು.
‘ಲಸಿಕೀಕರಣ ಆಗದ ದೇಶಗಳಲ್ಲಿ ಬೇರೆ ಬೇರೆ ಪ್ರಭೇದಗಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಂಡರೂ ಸಾವುನೋವು ಸಂಭವಿಸಿಲ್ಲ. ಇದಕ್ಕೆ ಕಾರಣ ಲಸಿಕೀಕರಣ. ದೇಶದಲ್ಲಿ 185 ಕೋಟಿ ಹಾಗೂ ರಾಜ್ಯದಲ್ಲಿ 10.5 ಕೋಟಿ ಡೋಸ್ ಲಸಿಕೆ ನೀಡಲಾಗಿದೆ’ ಎಂದು ತಿಳಿಸಿದರು.