ಬೆಂಗಳೂರು: ನಕಲಿ ದಾಖಲೆ ಆಧರಿಸಿಯೇ ನೋಂದಣಿ ಪ್ರಕ್ರಿಯೆ ನಡೆಸಿದ ಆರೋಪದಲ್ಲಿ ಉಪನೋಂದಣಾಧಿಕಾರಿ(ಸಬ್ ರಿಜಿಸ್ಟ್ರಾರ್) ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
‘ನೋಂದಣಿ ಪ್ರಕ್ರಿಯೆ ಸಂದರ್ಭದಲ್ಲಿ ಅವರು ಕೇವಲ ‘ಪೋಸ್ಟ್ ಮನ್’ ರೀತಿ ವರ್ತಿಸಲು ಆಗುವುದಿಲ್ಲ’ ಎಂದು ಹೇಳಿದೆ.
‘ಬಾಗಲಕೋಟೆ ಜಿಲ್ಲೆ ಜಮಖಂಡಿಯ ಉಪನೋಂದಣಾಧಿಕಾರಿ ಭುವನೇಶ್ವರ ಅವರು ನಕಲಿ ದಾಖಲೆ ಆಧರಿಸಿ ಮಾರಾಟ ಕರಾರು ಪತ್ರ ನೋಂದಣಿ ಮಾಡಿದ್ದಾರೆ’ ಎಂದು ಆರೋಪಿಸಿ ಚಿದಾನಂದ ಅಜ್ಪಪ್ಪ ಮಾಲಿ ಎಂಬುವರು ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಭುವನೇಶ್ವರ ಅವರು, ‘ದಾಖಲೆಗಳ ಸಿಂಧುತ್ವ ಪರಿಶೀಲಿಸುವುದು ನನ್ನ ಕರ್ತವ್ಯದ ಭಾಗವಲ್ಲ’ ಎಂದು ವಾದಿಸಿದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್, ‘ಕರ್ನಾಟಕ ನೋಂದಣಿ ನಿಯಮಗಳ ಪ್ರಕಾರ ದಾಖಲೆಗಳನ್ನು ಪರಿಶೀಲಿಸುವುದು ಉಪನೋಂದಣಾಧಿಕಾರಿಯ ಕರ್ತವ್ಯ. ಅದನ್ನು ಅವರು ಮಾಡಿದಂತೆ ಕಾಣಿಸುತ್ತಿಲ್ಲ. ತನಿಖೆಯಿಂದ ಸತ್ಯ ಬಹಿರಂಗವಾಗಲಿ’ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.