ಬೆಂಗಳೂರು: ಅಂಗವಿಕಲತೆಯ ಪ್ರಮಾಣಪತ್ರ ಸಲ್ಲಿಸಲು ಐದು ನಿಮಿಷ ವಿಳಂಬವಾಗಿದೆ ಎಂಬ ಕಾರಣಕ್ಕೆ ವೈದ್ಯಕೀಯ ಸೀಟು ಪಡೆಯಲು ವಿಫಲವಾಗಿದ್ದ ಬೆಳಗಾವಿಯ ಯುವತಿಗೆ ನ್ಯಾಯ ಒದಗಿಸಿರುವ ಹೈಕೋರ್ಟ್, ಎಂಬಿಬಿಎಸ್ ಸೀಟು ನೀಡುವಂತೆ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಆದೇಶಿಸಿದೆ.
ಈ ಸಂಬಂಧ ವಿದ್ಯಾರ್ಥಿನಿ ತಜೀನ್ ಇನಾಂದಾರ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠದ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಪಿ.ಕೃಷ್ಣಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.
'ಕಾಲ ಕೆಲವೊಮ್ಮ ಕೆಲವರ ಜೀವನದಲ್ಲಿ ಏರುಪೇರು ಉಂಟು ಮಾಡುತ್ತದೆ ಮತ್ತು ಅವರು ಆ ಸನ್ನಿವೇಶದಲ್ಲಿ ಸಂತ್ರಸ್ತರಾಗುತ್ತಾರೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ಕುಟುಂಬದಿಂದ ಬುದ್ಧಿವಂತ ಹುಡುಗಿಗೆ ತೊಂದರೆ ಆಗಬಾರದು. ಆಕೆ ತನ್ನ ಜ್ಯೇಷ್ಠತೆ ಆಧಾರದಲ್ಲಿ ಪಡೆದಿರುವ ಸೀಟನ್ನು ಅಕೆಗೆ ನೀಡಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.