ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರು ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟರೆ ಅದನ್ನು ಅಪಘಾತ ಎಂದೇ ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.
‘ಅಪಘಾತ ಎಂದು ವ್ಯಾಖ್ಯಾನಿಸಲಾಗದು’ ಎಂಬ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ವಾದವನ್ನು ತಳ್ಳಿ ಹಾಕಿರುವನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿದ್ದ ಕಲಬುರ್ಗಿ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಅಪಘಾತ ಎಂದರೆ ಅನಿರೀಕ್ಷಿತ ಘಟನೆ. ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಉಂಟಾದರೆ, ಅದು ನೌಕರನ ಹೃದಯಕ್ಕೆ ಅನಿರೀಕ್ಷಿತವಾಗಿ ಆದ ತೊಂದರೆ. ಹೀಗಾಗಿ ಅದನ್ನು ಅಪಘಾತ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಹೇಳಿತು.
ಎನ್ಇಕೆಆರ್ಟಿಸಿಯಲ್ಲಿ ಬಸ್ ಚಾಲಕರಾಗಿದ್ದ ವಿಜಯಕುಮಾರ್ ಅವರು 2012ರ ಸೆ.5ರಂದು ಕರ್ತವ್ಯದಲ್ಲಿದ್ದರು. ಬಸ್ ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದರು. ಪರಿಹಾರ ಕೋರಿ ಪತ್ನಿ ಮತ್ತು ಮಕ್ಕಳು ಅರ್ಜಿ ಸಲ್ಲಿಸಿದ್ದರು.
‘ಮೃತರ ಕುಟುಂಬಕ್ಕೆ ₹21 ಲಕ್ಷ ಪರಿಹಾರ ನೀಡುವಂತೆ 2017ರಲ್ಲಿ ಕಲಬುರ್ಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಹೈಕೋರ್ಟ್ಗೆ ಎನ್ಇಕೆಆರ್ಟಿಸಿ ಮೇಲ್ಮನವಿ ಸಲ್ಲಿಸಿತ್ತು. ಹೃದಯಾಘಾತ ಆಗಿರುವ ಕಾರಣ ಅದು ಸಹಜ ಸಾವು. ಅದನ್ನು ಅಪಘಾತ ಎಂದು ಪರಿಗಣಿಸಿ ಪರಿಹಾರ ನೀಡಲು ಆಗುವುದಿಲ್ಲ’ ಎಂದು ವಾದಿಸಿತ್ತು.
‘ವಾಹನ ಚಾಲನೆ ಕೆಲಸವು ಒತ್ತಡದಿಂದ ಕೂಡಿರುತ್ತದೆ. ವಿಜಯಕುಮಾರ್ ಅವರಿಗೆ ಹೃದಯಘಾತ ಸಂಭವಿಸಿದೆ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತಿವೆ. ಹೀಗಿರುವಾಗ ಅಧೀನ ನ್ಯಾಯಾಲಯದ ಆದೇಶ ಸೂಕ್ತವಾಗಿದೆ’ ಎಂದು ತಿಳಿಸಿದ ಪೀಠ, ಮೇಲ್ಮನವಿ ವಜಾಗೊಳಿಸಿತು.