ಸಕಲೇಶಪುರ: ‘ನಾನು ಜೆಡಿಎಸ್ ಪ್ರಾಡಕ್ಟ್ ಅಲ್ಲ. ಆಲೂರು–ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಕಟ್ಟಿದ ಕೋಟೆಗೆ ಜೆಡಿಎಸ್ ಒಕ್ಕಲು ಹಾಕಿದ್ದಾರೆ’ ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಶಾಸಕ ಎಚ್.ಡಿ.ರೇವಣ್ಣ ನನ್ನನ್ನು ಪಕ್ಷದ ಪ್ರಾಡಕ್ಟ್ ಎಂದು ಟೀಕಿಸಿದ್ದರು. ನನ್ನ ಸಾರ್ವಜನಿಕ ಜೀವನ ಆರಂಭವಾಗಿದ್ದೇ ಸಂಘ ಪರಿವಾರದಿಂದ, ನನ್ನದೇ ಹೋರಾಟದಿಂದ ನಾಯಕತ್ವ ಗಳಿಸಿದ್ದೇನೆ’ ಎಂದು ಪ್ರತಿಪಾದಿಸಿದರು.
‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್ ನೀಡಿದ್ದರು. ಜಿಲ್ಲೆಯಲ್ಲಿ ವಿಧಾನಸಭೆ ಕ್ಷೇತ್ರ ಸೇರಿದಂತೆ ವಿಇಧೆಡೆ ಆಡಳಿತವನ್ನು ಜೆಡಿಎಸ್ ತೆಕ್ಕೆಗೆ ತಂದಿದ್ದೆ. ಅಂದಿನ ಬುನಾದಿಯೇ ಇಂದಿಗೂ ಆ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ’ ಎಂದರು.
‘ಗೌಡರ ಕುಟುಂಬದಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಏಳು ಮಂದಿಗೆ ಅಧಿಕಾರ ಸಿಕ್ಕಿದೆ. ಎಂಟನೆಯವರಿಗೆ ಅಧಿಕಾರ ನೀಡಲು ಹೊರಟಿದ್ದಾರೆ. ಅವರ ಕುಟುಂಬ ರಾಜಕಾರಣದ ದಾಹ ಜಿಲ್ಲೆಯ ಜನರಿಗೆ ಹೇಸಿಗೆ ಮೂಡಿಸಿದೆ’ ಎಂದರು.