ಬೆಂಗಳೂರು: 'ಅನ್ಯಾಯವಾದವರ ಪರ ನಿಂತು ಸರ್ಕಾರ ಹಾಗೂ ಅಧಿಕಾರಿಗಳಿಗೆ ಬಾರಕೋಲು ಬೀಸುತ್ತಿದ್ದ ಪ್ರೊ. ನಂಜುಂಡಸ್ವಾಮಿ ಅವರ ಪ್ರೇರಣೆಯಿಂದಲೇ ನಾನು ರಾಜಕೀಯಕ್ಕೆ ಬಂದೆ' ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಯ 'ಬಾರುಕೋಲು' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
'ಪ್ರಜಾಪ್ರಭುತ್ವ, ಕೃಷಿ, ಭ್ರಷ್ಟಾಚಾರ, ಅಧಿಕಾರಿಗಳ ನಡೆ ಬಗ್ಗೆ ನಂಜುಂಡಸ್ವಾಮಿ ಅವರು ತಮ್ಮದೇ ವಿಚಾರಧಾರೆಗಳನ್ನು ಹೊಂದಿದ್ದರು. ಅವರ ವಿಚಾರಧಾರೆ ಹಾಗೂ ಚಿಂತನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ. ಅವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದೂ ಹೇಳಿದರು.
'ಕಾಲೇಜು ದಿನಗಳಲ್ಲಿ ನಮ್ಮಲ್ಲಿ ರಾಜಕೀಯ ಹಾಗೂ ಸಮಾಜವಾದಿ ಚಿಂತನೆಗಳನ್ನು ನಂಜುಂಡಸ್ವಾಮಿ ಅವರು ಬಿತ್ತಿದ್ದರು. ಅಲ್ಲಿಯವರೆಗೂ ನನಗೆ ರಾಜಕೀಯ ಗಂಧ ಗಾಳಿಯೂ ಇರಲಿಲ್ಲ'ಎಂದೂ ತಿಳಿಸಿದರು.
ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ, ವಕೀಲ ರವಿವರ್ಮಕುಮಾರ್, ಪುಸ್ತಕ ಸಂಪಾದಕರಾದ ನಟರಾಜ್ ಹುಳಿಯಾರ್ ಹಾಗೂ ರವಿಕುಮಾರ ಬಾಗಿ ಹಾಜರಿದ್ದರು.