ಬೆಂಗಳೂರು: ‘ಆರ್.ಆರ್. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಸಿದ್ಧಾಂತ, ಅಭ್ಯರ್ಥಿಯನ್ನು ಮುಂದಿಟ್ಟು ಮತ ಕೇಳುತ್ತೇವೆ. ಬೇರೆ ಪಕ್ಷಗಳು ಏನು ಮಾಡುತ್ತಿವೆ ಎಂಬುದು ನಮಗೆ ಬೇಕಾಗಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
‘ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆಯಲಿದೆ’ ಎಂಬ ಬಿಜೆಪಿ ನಾಯಕ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, 'ವಿಜಯೇಂದ್ರ ಅವರಿಗೆ ಅವರಿಗೆ ಶುಭ ಕೋರುತ್ತೇನೆ’ ಎಂದರು.
'ಯಾರು ಯಾರ ಜತೆಯಾದರೂ ನೆಂಟಸ್ಥನ, ಸಂಬಂಧ ಬೆಳೆಸಲಿ. ಯಾವುದೇ ಮೈತ್ರಿ ಬೇಕಾದರೂ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ಚಿಂತಿಸುವುದಿಲ್ಲ’ ಎಂದರು.
ಸರ್ಕಾರ ವಿಫಲ: ‘ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಬಿಎಂಪಿ ಆಯುಕ್ತರು, ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರನ್ನು ಬದಲಾಯಿಸುವ ಮೂಲಕ ವೈಫಲ್ಯವನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಸರ್ಕಾರದ ಅಸಮರ್ಥತೆಯಿಂದ ಜನ ನರಳುವಂತಾಗಿದೆ’ ಎಂದರು.
ಕಾರ್ತಿ ಚಿದಂಬರಂ ಭೇಟಿ: 'ಕಾರ್ತಿ ಚಿದಂಬರಂ ಅವರದ್ದು ಕೇವಲ ಸೌಜನ್ಯದ ಭೇಟಿ. ರಾಜಕೀಯ ವಿಶೇಷವೇನೂ ಇಲ್ಲ. ಸಂಸದರಾಗಿರುವ ಅವರು ರಾಜಕೀಯವಾಗಿ ಸಹೋದ್ಯೋಗಿ. ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ’ ಎಂದು ಹೇಳಿದರು.
ಮುಖ್ಯ ಚುನಾವಣಾಧಿಕಾರಿಗೆ ದೂರು: ಆರ್.ಆರ್.ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಮತ್ತು ಇತರರ ಮೇಲೆ ಎಫ್ಐಆರ್ ದಾಖಲಿಸಿರುವ ಇನ್ಸ್ಪೆಕ್ಟರ್ ನವೀನ್ ಅವರನ್ನು ವರ್ಗಾವಣೆ ಮಾಡಬೇಕು ಮತ್ತು ಅಮಾನತುಗೊಳಿಬೇಕು ಎಂದು ಆಗ್ರಹಿಸಿ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.