ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾರ್ಯವಾದರೆ ಎಸ್ಮಾ ಜಾರಿ: ಸಾರಿಗೆ ನೌಕರರಿಗೆ ಸರ್ಕಾರದ ಎಚ್ಚರಿಕೆ

Last Updated 8 ಏಪ್ರಿಲ್ 2021, 12:08 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿಸಮನಾದ ವೇತನ ನೀಡಲು ಸಾಧ್ಯವಿಲ್ಲ. ಆದರೆ, ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇತನ ಪರಿಷ್ಕರಣೆ ಮಾಡುವುದಾಗಿ ಮಾತು ಕೊಟ್ಟಿದ್ದೇವೆ‌’ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ‌ ಪರ್ವೇಜ್ ಹೇಳಿದರು.

ಸುದ್ದಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ. ಪ್ರತಿಭಟನೆ ಮಾಡುತ್ತಿರುವವರ ಮತ್ತುಅದಕ್ಕೆ ಪ್ರಚೋದನೆ ನೀಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅನಿವಾರ್ಯವಾದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ವಿಜಯಪುರ ಮತ್ತು ಚಾಮರಾಜನಗರದಲ್ಲಿ ಕ್ವಾರ್ಟರ್ಸ್ ಖಾಲಿ ಮಾಡುವಂತೆ ಸಾರಿಗೆ ನೌಕರರಿಗೆ ನೊಟೀಸ್ ಕೊಟ್ಟಿದ್ದನ್ನು ತಡೆಹಿಡಿದಿದ್ದೇವೆ. ಯಾರನ್ನೂ ಮನೆ ಖಾಲಿ ಮಾಡಿಸಲ್ಲ. ಎಸ್ಮಾ ಜಾರಿ ಮಾಡಲು ಅವಕಾಶವಿದೆ. ಜೂನ್‌ವರೆಗೆ ಎಸ್ಮಾ ಜಾರಿ ಅವಕಾಶವನ್ನು ಕಾರ್ಮಿಕ ಇಲಾಖೆ ನೀಡಿದೆ’ ಎಂದೂ ಹೇಳಿದರು.

‘ಮುಷ್ಕರದಿಂದ ದಿನಕ್ಕೆ ₹ 20 ಕೋಟಿ ನಷ್ಟವಾಗುತ್ತಿದೆ‌. ಈಗಾಗಲೇ ₹ 40 ಕೋಟಿ ನಷ್ಟವಾಗಿದೆ. ಹೀಗಾಗಿ, ಹಠ ಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದರು.

‘ನಾವು ಈಗಲೂ ಮಾತುಕತೆಗೆ ಸಿದ್ದ. ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ 10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ಧ. ನಂತರ ಉಳಿದ ಶೇ 2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು. ಈ ಮುಷ್ಕರ ಮುಂದುವರಿದರೆ ಕಳೆದ ಎರಡು ವರ್ಷದ ಹಿಂದೆ ನಿವೃತ್ತರಾಗಿರುವ ಹಾಗು ದೈಹಿಕವಾಗಿ ಸಶಕ್ತರಾಗಿರುವ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದರು.

‘ಸಾರಿಗೆ ವಿಭಾಗಗಳಲ್ಲಿ 20 ಸಾವಿರ ಬಸ್‌ಗಳಿವೆ. ನಿತ್ಯ 40 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ‌. ಪೂರ್ಣ ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಾಗದೇ ಇದ್ದರೂ ಭಾಗಶಃ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ.

‘ಕಳೆದ ವರ್ಷ ಜನವರಿಯಲ್ಲೇ ವೇತನ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿತ್ತು‌. ಆದರೆ, ಕೋವಿಡ್ ಕಾರಣದಿಂದ ಸ್ಥಗಿತವಾಗಿತ್ತು. ಈ ಹಿಂದೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶೇ 5ರಿಂದ ಶೇ 10ರಷ್ಟು ವೇತನ ಹೆಚ್ಚಳ ಮಾಡಲಾಗಿದೆ‌. ಈಗಾಲೇ ಸರ್ಕಾರ ಒಪ್ಪಿಕೊಂಡು ಈಡೇರಿಸಿರುವ ಎಂಟು ಬೇಡಿಕೆಗಳು ಸಣ್ಣ ಪುಟ್ಟ ಬೇಡಿಕೆಗಳಲ್ಲ’ ಎಂದರು.

‘‍ವೇತನ ಪರಿಷ್ಕರಣೆ ಸಂಬಂಧ ಉಪ ಮುಖ್ಯಮಂತ್ರಿ ಕೂಡಾ ನೌಕರರ ಯೂನಿಯನ್‌ಗಳ ಜತೆ ಸುಮಾರು ಎರಡೂವರೆಗಂಟೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಕೋವಿಡ್ ಲಾಕ್‌ಡೌನ್ ಸಮಯದಲ್ಕೂ ವೇತನ ಪಾವತಿ ನಿಲ್ಲಿಸಿಲ್ಲ. ಈಗಲೂ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ದವಿದೆ. ಆದರೆ, ಘೋಷಣೆ ಮಾಡಲು ಇದು ಸಮಯವಲ್ಲ‌. ನಮ್ಮ ಮಾತಿಗೆ ಬೆಲೆ ಕೊಡದೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ’ ಎಂದರು.

‘ಸಾರಿಗೆ ನೌಕರರ ಮುಷ್ಕರ ಹೊಸದೇನಲ್ಲ‌. ಆಡಳಿತ ಮಂಡಳಿ ಹಾಗು ನೌಕರರ ಘರ್ಷಣೆ ಹೊಸದೇನಲ್ಲ. ಆದರೆ, ಇದೇ ಮೊದಲ ಬಾರಿಗೆ ನೌಕರರು ಬಿಗಿಪಟ್ಟು ಹಿಡಿದು ಕೂತಿದ್ದಾರೆ‌. ಕಳೆದ ಡಿಸೆಂಬರ್, ಫೆಬ್ರವರಿ ಮಾರ್ಚ್‌ನಲ್ಲಿಯೂ ನೌಕರರ ಸಂಘಟನೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಮುಷ್ಕರದ ಕಾರಣ ಪರ್ಯಾಯವಾಗಿ, ಸಾರಿಗೆ ಇಲಾಖೆಯಿಂದ 21 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸೇವೆ ಒದಗಿಸಿದ್ದೇವೆ‌’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT