ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಕೆಐಎಡಿಬಿಯಲ್ಲಿ ಅಕ್ರಮ: ಅನರ್ಹರಿಗೆ ₹79 ಕೋಟಿ ಪರಿಹಾರ

‌ಕೆಐಎಡಿಬಿ: ಕೆಎಎಸ್‌ ಅಧಿಕಾರಿಗಳಿಬ್ಬರಿಂದ ಅಕ್ರಮ – ಆರೋಪ
Last Updated 7 ಜುಲೈ 2022, 23:59 IST
ಅಕ್ಷರ ಗಾತ್ರ

ನವದೆಹಲಿ: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ ಅಕ್ರಮವಾಗಿ ಖಾತೆ ಮಾಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ₹79.28 ಕೋಟಿ ಮೊತ್ತವನ್ನು ನಿಯಮಬಾಹಿರವಾಗಿ ಅನರ್ಹರಿಗೆ ಪರಿಹಾರ ನೀಡಲಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾದ ಇಬ್ಬರು ಕೆಎಎಸ್‌ ಅಧಿಕಾರಿಗಳಿಗೆ ಈಗ ಸಂಕಷ್ಟ ಎದುರಾಗಿದೆ.

ಈ ಹಗರಣದಲ್ಲಿ ಭಾಗಿಯಾದ ಕೆಐಎಡಿಬಿ ಮೈಸೂರು ವಲಯ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿ (ಈಗ ನಿವೃತ್ತ) ಎಚ್‌.ಕೆ.ಕೃಷ್ಣಮೂರ್ತಿ ವಿರುದ್ಧ ಸಿವಿಲ್‌ ಮೊಕದ್ದಮೆ ಹೂಡಿ ಆರ್ಥಿಕ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಈ ನಿವೃತ್ತ ಅಧಿಕಾರಿಯ ವಿರುದ್ಧ ಮೈಸೂರಿನ ಮೇಟಗಳ್ಳಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂಜನಗೂಡು ತಹಶೀಲ್ದಾರ್‌ ಆಗಿದ್ದ ನವೀನ್‌ ಜೋಸೆಫ್‌ (ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ) ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದ್ದು, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸರ್ಕಾರ ನಿರ್ಧರಿಸಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜುಲೈ 1ರಂದು ನಡೆದ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಾಗಿದೆ. ಈ ಹಗರಣದ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಸೂಚಿಸಿದೆ.

ಏನಿದು ಪ್ರಕರಣ:ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಅಡಕ್ಕನಹಳ್ಳಿ, ತಾಂಡವಪುರ ಹಾಗೂ ಇಮ್ಮಾವು ಗ್ರಾಮಗಳಲ್ಲಿ 1,123 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ 2007ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008ರಲ್ಲಿ 1,138 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಇಮ್ಮಾವು ಗ್ರಾಮದ 1,015 ಎಕರೆ ಸಹ ಸೇರಿದೆ.

ಭೂಸ್ವಾಧೀನಪಡಿಸಿಕೊಂಡ ಜಮೀನಿನ ಪೈಕಿ ಇಮ್ಮಾವು ಗ್ರಾಮದ ಹೊಸ ಸರ್ವೆ ಸಂಖ್ಯೆ 582, 583, 584, 585, 586, 587 ರ
ಜಮೀನಿಗೆ ಎಚ್.ಕೆ.ಕೃಷ್ಣಮೂರ್ತಿ₹79.28 ಕೋಟಿ ಪರಿಹಾರ ಪಾವತಿಸಿದ್ದಾರೆ.

ಇಮ್ಮಾವು ಗ್ರಾಮದ ಹಳೆಯ ಸರ್ವೆ ಸಂಖ್ಯೆ 390ರಿಂದ 400ರ ವರೆಗಿನ ಖಾತೆದಾರರು ಭೀಷ್ಮ ಪಿತಾಮಹ. ಈ ಪ್ರಕರಣದಲ್ಲಿ ಅವರ ಕುಟುಂಬ ಸದಸ್ಯರಾದ ಪ್ರದೀಪ್‌ ಎಂಬುವರಿಗೆ ₹5.15 ಕೋಟಿ, ಸೋನು ಎಂಬುವರಿಗೆ ₹6.10 ಕೋಟಿ, ಹರ್ಷಕುಮಾರ್‌, ಶೋಭಾದೇವಿ, ಹೇಮಲತಾ, ನಿಶಾ ಶರ್ಮಾ, ಅಂಜನಾ ಶರ್ಮಾ, ವಿಜಯಲಕ್ಷ್ಮಿ ಎಂಬುವರಿಗೆ ತಲಾ ₹11.34 ಕೋಟಿ ಪರಿಹಾರ ನೀಡಲಾಗಿದೆ. ಪಹಣಿಪತ್ರದ (ಆರ್‌ಟಿಸಿ) ನೈಜತೆ ಪರಿಶೀಲಿಸದೆ, ಖಾತೆದಾರರ ಮರಣ ಪ್ರಮಾಣಪತ್ರ ಹಾಗೂ ಉತ್ತರಾಧಿಕಾರಿ ಪ್ರಮಾಣಪತ್ರಗಳನ್ನು ಸಹ ಪಡೆಯದೆ ಪರಿಹಾರ ವಿತರಿಸಲಾಗಿದೆ. ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವಂತೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಭೂಸ್ವಾಧೀನದ ಮಾಹಿತಿ ಇದ್ದರೂ ಪರಿಹಾರ ವಿತರಣೆ:

ಈ ಜಮೀನಿನ ಮೂಲ ಖಾತೆದಾರರು ತ್ರಿಪುರ ಭೈರವಿ ಮಠದ ಮಹಾಂತ ಪಿ.ಕೃಷ್ಣಾನಂದ ಗಿರಿ ಗೋಸ್ವಾಮಿ. ಅವರು ಅವಿವಾಹಿತರು. ನಂಜನಗೂಡು ತಾಲ್ಲೂಕಿನಲ್ಲಿ 891 ಎಕರೆ ಜಾಗ ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದರು. ಅವರ ನಿಧನದ ಬಳಿಕ ಸಹೋದರ ಭೀಷ್ಮ ಪಿತಾಮಹ ಹಾಗೂ ಮಠದ ಮಹಾಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ನಡುವೆ ಉತ್ತರದಾಯಿತ್ವದ ಜಗಳ ಆರಂಭವಾಯಿತು. ಈ ಹಿಡುವಳಿಗಳು ಪಿತ್ರಾರ್ಜಿತ ಎಂದು ಸಹೋದರ ವಾದಿಸಿದರೆ, ಇದು ಮಠಕ್ಕೆ ಸೇರಿದ್ದು ಎಂದು ಮಹಾಂತರು ವಾದಿಸಿದರು. ಭೂನ್ಯಾಯ ಮಂಡಳಿಯು ಭೀಷ್ಮ ಪಿತಾಮಹ ಕುಟುಂಬಕ್ಕೆ 90 ಯುನಿಟ್‌ ಜಮೀನು ಹಂಚಿಕೆ ಮಾಡಿತು.

ಈ ಪ್ರಕರಣದಲ್ಲಿ ಒಂಬತ್ತು ಮಂದಿಗೆ ತಲಾ 10 ಯುನಿಟ್‌ ಜಮೀನು ಹಂಚಿಕೆ ಮಾಡಿ ಅಕ್ರಮ ಎಸಗಲಾಗಿದೆ. ಜತೆಗೆ, ಈ ಪ್ರಕರಣದಲ್ಲಿ ಮೃತಪಟ್ಟವರಿಗೂ ಪರಿಹಾರ ನೀಡಲಾಗಿದೆ. ಭೂಸುಧಾರಣಾಕಾಯ್ದೆಯ ಪ್ರಕಾರ,ಭೂನ್ಯಾಯ ಮಂಡಳಿಯು ಕುಟುಂಬದ ಐವರು ಸದಸ್ಯರಿಗೆ ಗರಿಷ್ಠ 20 ಯುನಿಟ್‌ ಜಮೀನು ಹಂಚಿಕೆ ಮಾಡಬಹುದು. ಆದರೆ, ಈ ಪ್ರಕರಣದಲ್ಲಿ 90 ಯುನಿಟ್‌ ಹಂಚಿಕೆ ಮಾಡಲಾಗಿದೆ. ಇಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 2(12) ಬದಲು ಹಿಂದೂ ಅವಿಭಕ್ತ ಕುಟುಂಬ ಕಾಯ್ದೆ 2005 ರ ಪ್ರಕಾರ ಕುಟುಂಬದ ವ್ಯಾಖ್ಯಾನ ಮಾಡಿ ಭೂ ಮಿತಿಯನ್ನು ನಿಷ್ಕರ್ಷೆ ಮಾಡಿ ಹಂಚಿಕೆ ಮಾಡಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಂಚಿಕೆಯಾದ ಜಮೀನುಗಳು ಕೆಐಎಡಿಬಿಗೆ ಭೂಸ್ವಾಧೀನ ಆಗಿರುವ ವಿಚಾರ ಭೂನ್ಯಾಯ ಮಂಡಳಿ ಅಧ್ಯಕ್ಷರಿಗೆ ತಿಳಿದಿತ್ತು. ಆದರೂ, ತರಾತುರಿಯಲ್ಲಿ ಹಂಚಿಕೆದಾರರ ಹೆಸರಿಗೆ ಆದೇಶವನ್ನು ಹೊರಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಕೆಎಎಸ್‌ ಅಧಿಕಾರಿಗಳ ಜತೆಗೆ, ಹಿಂದಿನ ಶಿರಸ್ತೇದಾರ ಟಿ.ರಮೇಶ್‌ ಬಾಬು, ಹಿಂದಿನ ರಾಜಸ್ವ ನಿರೀಕ್ಷಕ ಬಿ.ಎಲ್‌.ಶಿವರಾಜ್‌, ಹಿಂದಿನ ಗ್ರಾಮ ಲೆಕ್ಕಿಗ ಎಸ್.ವೆಂಕಟೇಶ ಭಾಗಿಯಾಗಿದ್ದು, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅವರು ರಾಜ್ಯ ಸರ್ಕಾರಕ್ಕೆ ಅವರಿಗೆ 2022ರ ಜೂನ್‌ 24ರಂದು ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT