ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠ ಕೈ ಬಿಟ್ಟಿಲ್ಲ: ಸುರೇಶ್‌ ಕುಮಾರ್‌ ಸ್ಪಷ್ಟನೆ

Last Updated 20 ಫೆಬ್ರುವರಿ 2021, 9:49 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳನ್ನು ಕೈ ಬಿಟ್ಟಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಎಂದು ಸ್ಪಷ್ಟಪಡಿಸಿದ್ದಾರೆ.

‘ಬೌಧ ಧರ್ಮ ಮತ್ತು ಜೈನ ಧರ್ಮದ ಕುರಿತ ಪಾಠವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಗೃಹಿಕೆಯಿಂದ ಈ ಸುದ್ದಿಗಳು ಬಂದಿವೆ’ ಎಂದು ಅವರು ಹೇಳಿದ್ದಾರೆ.

‘ಆರನೇ ತರಗತಿಯ ಸಮಾಜವಿಜ್ಞಾನ ಭಾಗ–1ರ ಪಾಠದ ಪೀಠಿಕಾ ರೂಪದ ವಿವರಣೆಯಲ್ಲಿ ಅನಗತ್ಯ ಮತ್ತು ಆರನೇ ತಗರತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯಾಂಶ ಇದೆ ಎಂಬ ಅನೇಕರ ಅಭಿಪ್ರಾಯಗಳಿಗೆ ಪೂರಕವಾಗಿ, ಅದನ್ನು ಕೈಬಿಡಲು ನಿರ್ಧರಿಸಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಭೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳಿಗೆ ಕೊಕ್‌ ನೀಡಿಲ್ಲ. ಆ ಪಾಠಗಳು ಪೂರ್ಣವಾಗಿ ಇವೆ, ಇರುತ್ತವೆ’ ಎಂದೂ ಅವರು ತಿಳಿಸಿದ್ದಾರೆ.

‘ಯಾವುದೇ ಧರ್ಮದ‌ ಪರಿಚಯ ಪಾಠಗಳಿಗೆ ಕೊಕ್ ನೀಡಲಾಗಿಲ್ಲ.‌ ಅನಗತ್ಯ ವಿವಾದ ಹುಟ್ಟುಹಾಕುವ ಅವಶ್ಯಕತೆ ಇಲ್ಲ’ ಎಂದೂ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.

‘2016–17ನೇ ಸಾಲಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೊಂಡಂದಿನಿಂದ ಪಠ್ಯಗಳು ಜಾರಿಯಲ್ಲಿವೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಾರದು. ವಿಶೇಷವಾಗಿ ನಮ್ಮ ಮಕ್ಕಳಲ್ಲಿ ಅನಗತ್ಯ ದ್ವೇಷದ ಭಾವನೆ ಬಿತ್ತಬಾರದು ಎನ್ನುವ ಸದುದ್ದೇಶದಿಂದ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಭೌದ್ಧ ಧರ್ಮ ಹಾಗೂ ಜೈನ ಧರ್ಮ ಅಥವಾ ಇನ್ಯಾವುದೇ ಧರ್ಮದ ಅವಹೇಳನವನ್ನು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದೂ ಅವರು ಹೇಳಿದ್ದಾರೆ.

‘ಸಾರ್ವಜನಿಕ ಶಿಕ್ಷಣ ಇಲಾಖೆಯು 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ ವಿಷಯಗಳ ಕುರಿತು ಶಿಕ್ಷಕರು ಹಾಗೂ ತಜ್ಞರುಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಅವರಿಂದ ವರದಿ ಪಡೆದು ಕ್ರಮ ತೆಗೆದುಕೊಳ್ಳಲು ಕೂಡಾ ಉದ್ದೇಶಿಸಲಾಗಿದೆ’ ಎಂದೂ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT