ತಿಪಟೂರು: ನಗರದ ಎಪಿಎಂಸಿಯ ಹಲವು ವರ್ತಕರು ಹಾಗೂ ರವಾನೆದಾರರ ಮನೆ, ಅಂಗಡಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದರು.
ಎಪಿಎಂಸಿಯ ವರ್ತಕ ಹಾಗೂ ರವಾನೆದಾರರಾದ ಮಾಜಿ ಶಾಸಕ ಬಿ.ನಂಜಾಮರಿ, ಜಿ.ರುದ್ರಯ್ಯ ಟ್ರೇಡರ್ಸ್, ಸಂಪಿಗೆ ಟ್ರೇಡರ್ಸ್, ವಿ.ಪಿ.ಟ್ರೇಡರ್ಸ್, ಗಣೇಶ್ ಟ್ರೇಡರ್ಸ್ ಆ್ಯಂಡ್ ಕೋ ಆಪರೇಟಿವ್ ಮಾಲೀಕರ ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆದಿದೆ.
ನಂಜಾಮರಿ ಅವರ ಬೆಳಗರಹಳ್ಳಿ ಮನೆಯಲ್ಲಿ ಬೆಳಿಗ್ಗಿನಿಂದ ಸಂಜೆವರೆಗೂ ಅಧಿಕಾರಿಗಳ ತಂಡ ಬೀಡು ಬಿಟ್ಟಿದ್ದು, ವಹಿವಾಟಿನ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದೆ. ಟ್ರೇಡರ್ಸ್ಗಳ ಮಾಲೀಕರ ಮನೆಗಳಲ್ಲೂ ಅಗತ್ಯ ದಾಖಲೆಗಳು, ಬ್ಯಾಂಕ್ ವಹಿವಾಟು ಸೇರಿದಂತೆ ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆಗೆ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಿದ ಅಧಿಕಾರಿಗಳ ತಂಡ ಅಗತ್ಯ ಮಾಹಿತಿಯನ್ನು ಪಡೆದುಕೊಂಡಿತು. ಬೆಳಿಗ್ಗೆಯೇ ಆದಾಯ ತೆರಿಗೆ ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಹಲವು ವರ್ತಕರು ಎಪಿಎಂಸಿಯಲ್ಲಿ ತಮ್ಮ ಅಂಗಡಿಗಳನ್ನು ತೆರೆಯಲಿಲ್ಲ. ಕೊಬ್ಬರಿ ವಹಿವಾಟಿನ ದಿನವಾದ ಬುಧವಾರ ಬೆಲೆಯು ಕ್ವಿಂಟಲ್ಗೆ ₹300ರವರೆಗೆ ಇಳಿಕೆಯಾಗಿದೆ. ಪ್ರತಿಷ್ಠಿತ ಟ್ರೇಡರ್ಗಳು ಹರಾಜಿನಲ್ಲಿ ಭಾಗವಹಿಸಲಿಲ್ಲ.
ಅಧಿಕಾರಿಗಳ ತಂಡ ಗುರುವಾರವೂ ತನಿಖೆ ಮುಂದುವರಿಸಲಿದ್ದು, ಇತರೆ ವರ್ತಕರು, ರವಾನೆದಾರರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.