ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರತ್ನದೊಂದಿಗೆ ಜೆಡಿಎಸ್‌ ಚುನಾವಣಾ ಕಹಳೆ: ಟಿಕೆಟ್‌ ಆಕಾಂಕ್ಷಿಗಳಿಗೆ ಕಾರ್ಯಾಗಾರ

Last Updated 19 ಅಕ್ಟೋಬರ್ 2022, 10:29 IST
ಅಕ್ಷರ ಗಾತ್ರ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ಮತ್ತು ನ.1ರಿಂದ ಹಮ್ಮಿಕೊಂಡಿರುವ ‘ಪಂಚರತ್ನ’ ರಥಯಾತ್ರೆಗೆ ಸಜ್ಜಾಗುವ ಪ್ರಮುಖ ಕಾರ್ಯಸೂಚಿಯೊಂದಿಗೆ ಜೆಡಿಎಸ್‌ನಿಂದ ಹೊರವಲಯದ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿರುವ ಸಮಾಲೋಚನಾ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಎರಡು ದಿನಗಳ ಈ ಕಾರ್ಯಾಗಾರದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು, ಟಿಕೆಟ್‌ ಆಕಾಂಕ್ಷಿಗಳು, ಶಾಸಕರು, ಮಾಜಿ ಶಾಸಕರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಕೂಡ ಅ.20ರಂದು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.

‘ಪಂಚರತ್ನ’ ರಥಯಾತ್ರೆ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ರಥಯಾತ್ರೆ ಸ್ವರೂಪವೇನು, ಯಾವ್ಯಾವ ಮಾರ್ಗದಲ್ಲಿ ಸಾಗುತ್ತದೆ, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ, ಸಮಾವೇಶದ ಬಗ್ಗೆ ಮಾಹಿತಿ ವಿನಿಮಯ ನಡೆಯಿತು. ಪೋಸ್ಟರ್‌, ಜಾಲತಾಣವನ್ನೂ ಬಿಡುಗಡೆ ಮಾಡಲಾಯಿತು. ಇದರೊಂದಿಗೆ, ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗುವಂತೆ ಸಾಂಸ್ಕೃತಿಕ ನಗರಿಯಿಂದ ಕಹಳೆ ಮೊಳಗಿಸಲಾಯಿತು.

ಕಾರ್ಯತಂತ್ರದ ಬಗ್ಗೆ:

‘ಪಂಚರತ್ನ’ವಾದ ಶಿಕ್ಷಣ, ಆರೋಗ್ಯ, ಯುವ ಮತ್ತು ಮಹಿಳಾ ಸಬಲೀಕರಣ, ಕೃಷಿ-ನೀರಾವರಿ, ಉದ್ಯೋಗ, ವಸತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಟಿಕೆಟ್‌ ಆಕಾಂಕ್ಷಿಗಳಿಗೆ ಸೂಚಿಸಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ತಿಳಿಸಿಕೊಡಲಾಯಿತು.

ಉದ್ಘಾಟಿಸಿ ಪಕ್ಷದ ಏಳು–ಬೀಳುಗಳ ಚಿತ್ರಣ ನೀಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಸವಾಲನ್ನು ಸ್ವೀಕರಿಸಬೇಕು. ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡವಳಿಕೆಯಿಂದ ಬೇಸತ್ತಿರುವ ಜನರು ಪರ್ಯಾಯ ಬಯಸಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನತ್ತ ಒಲವು ತೋರಿಸುತ್ತಿದ್ದಾರೆ. ಹೀಗಾಗಿ, ನಮ್ಮ ಗುರಿ ಮುಟ್ಟುವುದಕ್ಕೆ ಬಹಳಷ್ಟು ಅವಕಾಶವಿದೆ. ಇದನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

‘ನಾವು ನೀಡಿರುವ ಟಾಸ್ಕ್‌ ಅನ್ನು ಕೆಲವರು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದ್ದೀರಿ. ಕೆಲವು ಕ್ಷೇತ್ರದಲ್ಲಿನ ಕಾರ್ಯ ಸಮಾಧಾನ ತಂದಿಲ್ಲ. ಚುನಾವಣೆ ಘೋಷಣೆಯಾಗಲಿ ನಂತರ ನೋಡೋಣ ಎಂದು ಸುಮ್ಮನಿದ್ದೀರಿ. ಇದು ಸರಿಯಲ್ಲ. ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ತಿಳಿಸಿ ಜನರ ಮನಗೆಲ್ಲಬೇಕು’ ಎಂದು ಸೂಚಿಸಿದರು.

250 ಸಾರ್ವಜನಿಕ ಸಮಾವೇಶ:

‘ಮುಂದಿನ ಆರು ತಿಂಗಳು ನಮಗೆ ಸತ್ವಪರೀಕ್ಷೆಯ ಕಾಲ. ನ.1ರಿಂದ ಆರಂಭಗೊಳ್ಳುವ ಪಂಚರತ್ನ ರಥಯಾತ್ರೆಯು 22 ಜಿಲ್ಲೆಗಳ 106 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಒಟ್ಟು 10 ಸಾವಿರ ಕಿ.ಮೀ. ಸಂಚರಿಸಲಿದೆ. 255 ಸಾರ್ವಜನಿಕ ಸಭೆಗಳು, 480 ಕಾರ್ನರ್ ಸಭೆಗಳಿರಲಿವೆ. ಕಾಂಗ್ರೆಸ್, ‌ಬಿಜೆಪಿಯವರಂತೆ ಕೋಟ್ಯಂತರ ರೂಪಾಯಿ ಖರ್ಚಿನ ಕಾರ್ಯಕ್ರಮವಿದಲ್ಲ. ಹಣವಿಲ್ಲದೆ ಜನರ ಬಳಿಗೆ ಹೋಗಿ ಅವರ ಸಂಕಷ್ಟ ಆಲಿಸುವ ಉದ್ದೇಶ ಹೊಂದಿರುವಂಥದ್ದು’ ಎಂದರು.

‘ಪ್ರತಿ ಕ್ಷೇತ್ರದ ವಾಸ್ತವಾಂಶದ ಸಮೀಕ್ಷೆ ನಡೆಸಿ ವರದಿಯನ್ನು ಪಡೆಯುತ್ತಿದ್ದೇನೆ. ಸಂಭಾವ್ಯರಿಗೆ ಅವಕಾಶ ಕೊಟ್ಟಿದ್ದೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಬೇರೆಯವರಿಗೆ ಟಿಕೆಟ್ ಕೊಡುತ್ತೇವೆ. ಕಠಿಣವಾದ ತೀರ್ಮಾನ ಮಾಡುತ್ತೇವೆ. ಈ ಬಾರಿ, ವ್ಯಾಮೋಹ–ಆತ್ಮೀಯತೆ ಮೇಲೆ ಬಿ–ನಮೂನೆ ಕೊಡುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ನೀಡಿದರು.

ಕೈಮುಗಿದ ಎಚ್‌ಡಿಕೆ:

‘ಬೇರೆಯವರ ಜೊತೆ ಕೈಜೋಡಿಸುವ ಕಷ್ಟವನ್ನು ತಂದೊಡ್ಡಬೇಡಿ’ ಎಂದು ಕೈಮುಗಿದು ಬೇಡಿಕೊಂಡ ಅವರು, ‘30-40 ಸೀಟು ಗೆದ್ದರೆ ಯಾರಾದರೂ ನೇತೃತ್ವ ವಹಿಸಿ ನೋಡಿಕೊಳ್ಳಲಿ, ನಾನು ದೂರದಲ್ಲೇ ನಿಂತು ಸಲಹೆ ಕೊಡುತ್ತೇನಷ್ಟೆ. ಇದಕ್ಕಾಗಿ ಸ್ಪರ್ಧಿಸಬೇಕೆಂದು ಸ್ಪರ್ಧಿಸಬೇಡಿ. ಗೆಲ್ಲಲೇಬೇಕೆಂದು ಸ್ಪರ್ಧಿಸಿ’ ಎಂದು ತಿಳಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಖಂಡ ಕುಪೇಂದ್ರ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT