ಬೆಂಗಳೂರು:ರಾಜ್ಯದಲ್ಲಿ ನದಿ ನೀರಿನ ಸದ್ಬಳಕೆ ಹಾಗೂ ವಿವಿಧ ನೀರಾವರಿ ಯೋಜನೆಗಳಸಮಗ್ರ ಅನುಷ್ಠಾನದ ಸಂಕಲ್ಪದೊಂದಿಗೆ ಆರಂಭಿಸಿರುವ ‘ಜನತಾ ಜಲಧಾರೆ’ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷ ರಾಜ್ಯದ ವಿವಿಧೆಡೆ ಶನಿವಾರ ಏಕಕಾಲದಲ್ಲಿ ಆರಂಭಿಸಿತು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಮೈಸೂರಿನಲ್ಲಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಲಮಟ್ಟಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ‘ಕುಡಿಯುವ ನೀರಿಗಾಗಿ ಸಂಸತ್ನಲ್ಲಿ ನನ್ನದು ಏಕಾಂಗಿ ಹೋರಾಟ ಆಗಿತ್ತು. ರಾಜ್ಯದ ಕಾಂಗ್ರೆಸ್, ಬಿಜೆಪಿ ಸಂಸದರು ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಆಲಮಟ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು, ‘ಜೆಡಿಎಸ್ ಅಧಿಕಾರಕ್ಕೆ ಬಂದರೆನದಿ ನೀರಿನ ಸದ್ಬಳಕೆ ಮಾಡಲಿದೆ. ನೀರಾವರಿಗಾಗಿಯೇ ₹ 3 ಲಕ್ಷ ಕೋಟಿ ಮೀಸಲಿರಿಸಲಾಗುವುದು’ ಎಂದು ಹೇಳಿದರು.
ರಾಜ್ಯದ 15 ಕಡೆಜಲಧಾರೆಯ ‘ಗಂಗಾರಥ’ಗಳಿಗೆ ಚಾಲನೆ ನೀಡಲಾಯಿತು. 94 ಕಡೆಗಳಲ್ಲಿ ನದಿ ನೀರು ಸಂಗ್ರಹಿಸಿ, 180 ವಿಧಾನಸಭಾ ಕ್ಷೇತ್ರಗಳ ಮೂಲಕ ಈ ‘ಗಂಗಾರಥ’ಗಳು ಹಾದುಹೋಗಲಿವೆ. ಮೇ 8ರಂದು ರಾಜಧಾನಿ ಬೆಂಗಳೂರು ತಲುಪಲಿವೆ.