ಸಿಂದಗಿ: ‘ನಮ್ಮ ಪಕ್ಷದ ಲಾಭ ಪಡೆದುಕೊಂಡವರು ಯಾರೂ ಜೊತೆಯಿಲ್ಲ. ಹಣ, ಅಧಿಕಾರದ ಬೆನ್ನು ಹತ್ತಿ ಹೋಗಿದ್ದಾರೆ. ಈಗಿನ ರಾಜಕಾರಣ ತತ್ವ ರಾಜಕಾರಣದಿಂದ ವಿಮುಖವಾಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿಷಾದಿಸಿದರು.
ಇಲ್ಲಿಯ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ದಿವಂಗತ ಎಂ.ಸಿ.ಮನಗೂಳಿ ಅವರನ್ನು ಎರಡು ಸಲ ಸಚಿವನನ್ನಾಗಿ ಮಾಡಿದ್ದೆ. ಆದರೆ ಅವರ ಮಗ ಕಾಂಗ್ರೆಸ್ಗೆ ಹೋದ. ಈ ಭಾಗದ ಸಂಸದ ರಮೇಶ ಜಿಗಜಿಣಗಿ ನಾನೇ ಬೆಳೆಸಿದ ವ್ಯಕ್ತಿ. ಆತ ಪಾರ್ಲಿಮೆಂಟ್ ಏರಿದ’ ಎಂದು ಅವರು ನೆನಪಿಸಿಕೊಂಡರು.
‘ಬರಡು ಭೂಮಿಯಾಗಿದ್ದ ಈ ನಾಡಿಗೆ ನೀರಾವರಿ ಯೋಜನೆ ಜಾರಿಗೆ ತಂದ ಕಾರಣ ರೈತರು ನನ್ನ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಗೋಲಗೇರಿಯಲ್ಲಿ ನನ್ನ ಮೂರ್ತಿ ಮಾಡಿ ಎಂದು ರೈತರಿಗೆ ನಾನೇನು ಅರ್ಜಿ ಹಾಕಿದ್ನಾ? ಇಲ್ಲವಲ್ಲ’ ಎಂದರು.