ಬೆಂಗಳೂರು:ಹಿಂದುಳಿದ ವರ್ಗ ದೊಡ್ಡ ಸಮುದಾಯವಾಗಿದೆ. ಈ ಸಮುದಾಯಗಳ ಯಾರೊಬ್ಬರೂ ಬಿಜೆಪಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಯಲಹಂಕ ಬಳಿಯ ಸಿಂಗನಾಯಕನಹಳ್ಳಿಯ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಹಿಂದುಳಿದ ಜಾತಿಗಳ ಪ್ರಭಾವಿ ಯಾರು? ನಾಯಕ ಯಾರು ಎಂಬುದನ್ನು ತಿಳಿಯಬೇಕು. ಎಲ್ಲ ಜಾತಿಗಳಲ್ಲಿರುವ ಪ್ರಭಾವಿ ನಾಯಕರುಬಿಜೆಪಿ ಎನ್ನುವ ಜಾತಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವಂತಾಗಬೇಕು. ನಮ್ಮ ಜಾತಿಯ ವ್ಯಕ್ತಿ ಬಿಜೆಪಿಯಲ್ಲಿದ್ದಾನೆ ಎಂಬ ಹೆಮ್ಮೆ ಎಲ್ಲ ಸಮುದಾಯಗಳಲ್ಲಿ ಮೂಡಬೇಕು ಎಂದರು.
ಎಲ್ಲ ಜಾತಿಗಳ ನಾಯಕರ ಬಗ್ಗೆ ಪಟ್ಟಿ ಮಾಡಿ ನಮ್ಮ ಪಕ್ಷದಲ್ಲಿ ಈ ಸಮುದಾಯದವರ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸಲು ದುಡಿಯಬೇಕು. ಬೇರೆ ಪಕ್ಷಗಳ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಕಾರ್ಯಕರ್ತರು ಮಾದರಿಯಾಗಿ ನಿಲ್ಲಬೇಕು ಎಂದರು.
ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರು. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ಬೊಮ್ಮಾಯಿ ಸರ್ಕಾರ ಸಾಮಾಜಿಕ ನ್ಯಾಯದ ಜತೆಗೆ ಸಾಮಾಜಿಕ ಅವಕಾಶ ವನ್ನೂ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾ ಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ಇದ್ದರು.