ಬೆಂಗಳೂರು: ಮನೆಯಲ್ಲಿದ್ದ ಅಂದಾಜು ₹4 ಕೋಟಿ ಮೌಲ್ಯದ 7.5 ಕೆ.ಜಿ. ಚಿನ್ನಾಭರಣ ಹಾಗೂ ವಜ್ರದ ಒಡವೆಗಳನ್ನು ಮಗಳು ಕದ್ದೊಯ್ದಿದ್ದಾಳೆ ಎಂದು ತಾಯಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ!
ವಿಜಯಲಕ್ಷ್ಮಿ ಎಂಬುವರು ನೀಡಿರುವ ದೂರಿನ ಆಧಾರದಲ್ಲಿ ಪುತ್ರಿ ತೇಜವಂತಿ ವಿರುದ್ಧ ಜೆ.ಪಿ.ನಗರ ಠಾಣೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಅನಾರೋಗ್ಯದ ಕಾರಣ ಆಗಾಗ ಆಸ್ಪತ್ರೆಗೆ ಹೋಗುತ್ತಿರುತ್ತೀಯ. ಮನೆಯಲ್ಲಿ ಯಾರೂ ಇರುವುದಿಲ್ಲ. ಈ ವೇಳೆ ಯಾರಾದರೂ ಅವುಗಳನ್ನು ಕದ್ದೊಯ್ಯಬಹುದು. ಲಾಕರ್ನಲ್ಲಿ ಅವುಗಳನ್ನು ಜೋಪಾನವಾಗಿ ಇಡುತ್ತೇನೆ ಎಂದು ಹೇಳಿ ಚಿನ್ನಾಭರಣ ಪಡೆದಿದ್ದ ಮಗಳು ಈಗ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಪತ್ತೆ ಮಾಡಿ ಚಿನ್ನಾಭರಣಗಳನ್ನು ಕೊಡಿಸಿ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಮನವಿ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಇಳಿ ವಯಸ್ಸಿನಲ್ಲಿ ಒಡವೆಗಳನ್ನೆಲ್ಲಾ ಇಟ್ಟುಕೊಂಡು ಏನು ಮಾಡಲಿ. ಹೇಗಿದ್ದರೂ ಇವು ನಿನಗೆ ಸೇರಬೇಕು ಎಂದು ಹೇಳಿದ್ದ ತಾಯಿ ಒಂದು ವರ್ಷದ ಹಿಂದೆ ಚಿನ್ನಾಭರಣಗಳನ್ನೆಲ್ಲಾ ನನಗೆ ಕೊಟ್ಟಿದ್ದರು. ಅಪ್ಪ ಮತ್ತು ಅಮ್ಮನ ನಡುವೆ ಸಂಬಂಧ ಸರಿ ಇಲ್ಲ. ಹೀಗಾಗಿ ಬಹುಕಾಲದಿಂದ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಾನು ಅಪ್ಪನ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಸಹಿಸಲಾಗದೆ ಅಮ್ಮ ನನ್ನ ಮೇಲೆ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ’ ಎಂದುತೇಜವಂತಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ತಾಯಿ ನೀಡಿರುವ ಚಿನ್ನಾಭರಣಗಳನ್ನು ಬ್ಯಾಂಕ್ವೊಂದರ ಲಾಕರ್ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದೇನೆ. ವೈದ್ಯೆಯಾಗಿರುವ ನಾನು ಇಂಗ್ಲೆಂಡ್ನಲ್ಲಿ ನೆಲೆಸಿದ್ದು, ಅಲ್ಲಿಂದ ಮರಳಿದ ಬಳಿಕ ಚಿನ್ನಾಭರಣಗಳನ್ನು ತಾಯಿಗೆ ಹಿಂತಿರುಗಿಸುವುದಾಗಿಯೂ ತೇಜವಂತಿ ತಿಳಿಸಿದ್ದಾರೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.