ಬೆಂಗಳೂರು: ‘ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಆಯಸ್ಸಿನ ಕುರಿತು ಕೀಳುಮಟ್ಟದಲ್ಲಿ ಮಾತನಾಡಿರುವುದು ಕನ್ನಡಿಗರಿಗೆ ಮಾಡಿದ ಅವಮಾನ’ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ರೈತ ಕುಟುಂಬದಲ್ಲಿ ಹುಟ್ಟಿದ ದೇವೇಗೌಡರು ದೇಶದ ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ನಿಂತು ರಾಷ್ಟ್ರ ಧ್ವಜಾರೋಹಣ ಮಾಡಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಚಾರ. ಹಿಂದಿನ ಪ್ರಧಾನಿಗಳು, ಈಗಿನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ದೇವೇಗೌಡರನ್ನು ಗೌರವಿಸುತ್ತಾರೆ. ಆದರೆ, ರಾಜಣ್ಣ ಕೆಟ್ಟದಾಗಿ ಮಾತನಾಡಿರುವುದು ನೋವಿನ ಸಂಗತಿ’ ಎಂದರು.
‘ಅವರು (ರಾಜಣ್ಣ) ಸಾವಿನ ಕುರಿತು ಮಾತನಾಡಿದ್ದಾರೆ. ಕೋವಿಡ್ನಿಂದ ಚಿಕ್ಕ ವಯಸ್ಸಿನವರೂ ಮೃತಪಟ್ಟಿದ್ದಾರೆ. ಅನೇಕರು ಸಂಕಷ್ಟ ಅನುಭವಿಸಿದ್ದಾರೆ. ದೇವೇಗೌಡರು ದೈವಭಕ್ತ. ಇಂತಹ ವಯಸ್ಸಲ್ಲೂ ಅವರು ಎಲ್ಲವನ್ನೂ ಗಟ್ಟಿಯಾಗಿ ಎದುರಿಸಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.