ಖಾನಾಪುರ (ಬೆಳಗಾವಿ ಜಿಲ್ಲೆ): ಕಳಸಾ ನಾಲಾ ತಿರುವು ಯೋಜನೆಗೆ ಅನುಮತಿ ನೀಡುವ ಸಂಬಂಧವಾಗಿ, ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಬದಲಾವಣೆ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿತು.
ಸಚಿವಾಲಯದ ಹಿರಿಯ ಐಎಫ್ಎಸ್ ಅಧಿಕಾರಿ ಅಂಜನಕುಮಾರ್ ನೇತೃತ್ವದಲ್ಲಿ, ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚವಾಣ ಅವರೂ ಇದ್ದರು.
ಅಧಿಕಾರಿಗಳ ತಂಡವು ಕಣಕುಂಬಿ ಸುತ್ತಮುತ್ತಲಿನ ಮಲಪ್ರಭಾ, ಮಹದಾಯಿ ನದಿಗಳು, ಕಳಸಾ ಹಳ್ಳ ಹಾಗೂ ಸುತ್ತಲಿನ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿತು. ಕಣಕುಂಬಿ ಬಳಿ ಕರ್ನಾಟಕ ನೀರಾವರಿ ನಿಗಮದಿಂದ ಕೈಗೊಂಡಿರುವ ಕಾಮಗಾರಿಯ ವಸ್ತುಸ್ಥಿತಿ ಅವಲೋಕಿಸಿತು.
‘ಕಳಸಾ ನಾಲೆ ತಿರುವ ಯೋಜನೆಗೆ ಬೇಕಾದ ಪರಿಸರ ಅನುಮತಿ ನೀಡುವ ಸಂಬಂಧ ಈ ತಂಡ ಪರಿಶೀಲನೆ ನಡೆಸಿದೆ. ತಂಡಕ್ಕೆ ಮಾಹಿತಿ ನೀಡಿದ್ದೇವೆ. ಕಣಕುಂಬಿ ಪ್ರವಾಸಿ ಮಂದಿರದ ಹಿಂಭಾಗ, ಮಾವುಲಿ ದೇವಸ್ಥಾನದ ಮುಂಭಾಗದಲ್ಲಿ ಈಗಾಗಲೇ ಕೈಗೊಂಡ ಕಾಮಗಾರಿಗಳನ್ನೂ ಅಧಿಕಾರಿಗಳಿಗೆ ತೋರಿಸಿದ್ದೇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ’ ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.