ಬೆಂಗಳೂರು: ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದರೆ ಕಾಂಗ್ರೆಸ್ ಮತ್ತು ಅದನ್ನು ವಿರೋಧಿಸುವವರಿಗೆ ಭಯ ಏಕೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಡಗೇವಾರ್ ಅವರ ಭಾಷಣ ಸೇರಿಸಿದ್ದರಲ್ಲಿ ತಪ್ಪೇನಿದೆ? ಅವರ ಪ್ರೇರಣೆಯಿಂದಲೇ ಕೋಟ್ಯಂತರ ಜನ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಪ್ರೇರಣೆಯಿಂದಲೇ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಅದು ನಮ್ಮ ಬದ್ಧತೆ ಎಂದು ಹೇಳಿದರು.
ಪಠ್ಯದಿಂದ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟಿಲ್ಲ. ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಬಗ್ಗೆ ನಾನೇ ಸ್ವತಃ ಶಿಕ್ಷಣ ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ನಾರಾಯಣ ಗುರು, ಭಗತ್ಸಿಂಗ್ ಪಠ್ಯ ತೆಗದು ಹಾಕಿಲ್ಲ ಎಂದರು.
ಚಕ್ರವರ್ತಿ ಸೂಲಿಬೆಲೆ, ತಾಯಿಭಾರತಿಗೆ ವಂದಿಸುವೆ ಅಂತಾ ಲೇಖನ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ. ತಾಯಿ ಭಾರತಿ ವಿಚಾರವನ್ನು ವಿರೋಧಿಸುವುದು ಏಕೆ ಎಂದೂ ಪ್ರಶ್ನಿಸಿದರು.