ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳ ನೇತೃತ್ವದಲ್ಲಿ 10 ದಿನಗಳ ‘ಕಲಾಗ್ರಾಮೋತ್ಸವ’

ಸಾಂಸ್ಕೃತಿಕ ಚಟುವಟಿಕೆಗೆ ಮರುಜೀವ ನೀಡಲು ಯೋಜನೆ
Last Updated 3 ಜನವರಿ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಂದೇ ಸೂರಿನಡಿ ನಾಟಕ, ಯಕ್ಷಗಾನ, ಜಾನಪದ ಕುಣಿತ, ಗಾಯನ, ನೃತ್ಯ, ಬಯಲಾಟ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಅನಾವರಣಗೊಳ್ಳಲು ವೇದಿಕೆ ಸಜ್ಜಾಗುತ್ತಿದೆ.

ಎಲ್ಲ ಸಾಂಸ್ಕೃತಿಕ ಅಕಾಡೆಮಿಗಳು, ಪ್ರಾಧಿಕಾರಗಳು, ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ವಿಭಾಗ, ಕರ್ನಾಟಕ ಚಿತ್ರಕಲಾ ಪರಿಷತ್ತು, ಸರ್ಕಾರಿ ಅನುದಾನಿತ ಸಂಘ–ಸಂಸ್ಥೆಗಳು ಒಟ್ಟಾಗಿ ಬೃಹತ್ ಸಾಂಸ್ಕೃತಿಕ ಉತ್ಸವ ಏರ್ಪಡಿಸಲು ಮುಂದಾಗಿವೆ. ಈ ಮೂಲಕ ಕೋವಿಡ್‌ನಿಂದ ಸೊರಗಿದ್ದ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶ ಹೊಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಫೆಬ್ರುವರಿ ತಿಂಗಳಲ್ಲಿ 10 ದಿನಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಕಲಾಗ್ರಾಮೋತ್ಸವ’ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಸುಮಾರು ₹ 2 ಕೋಟಿ ವೆಚ್ಚವಾಗಲಿದೆ. ಇಲಾಖೆ ಹಾಗೂ ಅಕಾಡೆಮಿಗಳೇ ಈ ವೆಚ್ಚ ಭರಿಸಲಿವೆ.

ಕರ್ನಾಟಕ ಲಲಿತಕಲಾ ಅಕಾಡೆಮಿಯ ನೇತೃತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳ ಜತೆಗೆ ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಅಧ್ಯಕ್ಷರು ಈ ಬಗ್ಗೆ ಸಭೆ ನಡೆಸಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಕಲಾ ತಂಡಗಳು ಹಾಗೂ ಕಲಾವಿದರು ಬರಲಿದ್ದು, ಏಕಕಾಲದಲ್ಲಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾವಿದರ ಹೆಸರು ನೋಂದಣಿ ಪ್ರಕ್ರಿಯೆ ಕೂಡ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿರಲಿಲ್ಲ. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಕಾರಣ ಇಲಾಖೆಯು ಈ ಯೋಜನೆ ಹಮ್ಮಿಕೊಂಡಿದೆ.

30 ಎಕರೆಯಲ್ಲಿ ಕಾರ್ಯಕ್ರಮ: ಕಲಾಗ್ರಾಮದಲ್ಲಿ ನಾಲ್ಕು ಬಯಲು ರಂಗಮಂದಿರಗಳು ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯವಿದೆ. ಇವುಗಳ ಜತೆಗೆ ತಾತ್ಕಾಲಿಕ ವೇದಿಕೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಕಲಾಗ್ರಾಮದ 30 ಎಕರೆಯಲ್ಲೂ ಒಂದಲ್ಲ ಒಂದು ಕಲಾ ಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗಿದೆ. ಕಲಾ ಶಿಬಿರಗಳು ಕೂಡ ನಡೆಯಲಿವೆ. ಪ್ರತಿ ಅಕಾಡೆಮಿ ಹಾಗೂ ಸಂಸ್ಥೆಗಳು ತನ್ನ ವ್ಯಾಪ್ತಿಯಲ್ಲಿ ಕಲಾ ತಂಡಗಳು ಹಾಗೂ ಕಲಾವಿದರನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಿವೆ.

‘ಕೋವಿಡ್ ಇಳಿಮುಖವಾದ ಕಾರಣ ನಿರ್ಬಂಧ ಸಡಿಲಿಸಲಾಗುತ್ತಿದೆ. ಕಳೆದ ವರ್ಷ ಕಲಾಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಚಿತ್ರಸಂತೆ ಮಾದರಿ ಕಲಾ ಪ್ರದರ್ಶನ ಏರ್ಪಡಿಸಲು ನಾವು ಯೋಜನೆ ರೂಪಿಸಿದ್ದೆವು. ಬಳಿಕ ಎಲ್ಲ ಅಕಾಡೆಮಿಗಳು ಹಾಗೂ ಸಂಘ–ಸಂಸ್ಥೆಗಳು ಒಟ್ಟಾಗಿ ಉತ್ಸವ ನಡೆಸಲು ನಿರ್ಧರಿಸಲಾಯಿತು. ಈ ಬಗ್ಗೆ ಸಭೆ ನಡೆಸಲಾಗಿದ್ದು, ರೂಪರೇಷೆ ಸಿದ್ಧವಾಗುತ್ತಿದೆ’ ಎಂದು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿ ಅನುಸಾರ ಕೋವಿಡ್ ನಿಯಮಗಳನ್ನು ಪಾಲಿಸಿ, ‘ಕಲಾಗ್ರಾಮೋತ್ಸವ’ ನಡೆಸಲು ನಿರ್ಧರಿಸಲಾಗಿದೆ. ಈ ಉತ್ಸವದಿಂದ ಕಲಾಗ್ರಾಮವೂ ಮುನ್ನೆಲೆಗೆ ಬರಲಿದೆ. ಕೋವಿಡ್‌ ಪ್ರಕರಣಗಳು ಏರಿಕೆ ಕಂಡಲ್ಲಿ ಮುಂದೂಡಬೇಕಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

500 ಮಳಿಗೆಗಳಲ್ಲಿ ಕಲಾಕೃತಿಗಳ ಪ್ರದರ್ಶನ

‘ಕಲಾಗ್ರಾಮೋತ್ಸವದಲ್ಲಿ’ ಕಲಾಕೃತಿಗಳ ಪ್ರದರ್ಶನಕ್ಕೆ 500 ಮಳಿಗೆಗಳನ್ನು ಸಿದ್ಧಗೊಳಿಸಲು ಲಲಿತಕಲಾ ಅಕಾಡೆಮಿ ಯೋಜನೆ ರೂಪಿಸಿದೆ. ಈ ಮಳಿಗೆಗಳಲ್ಲಿ ‌‘ಚಿತ್ರ ಸಂತೆ’ ಮಾದರಿಯಲ್ಲಿಯೇ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. ಕಲಾಕೃತಿಗಳ ಮಾರಾಟ ಕೂಡ ನಡೆಯಲಿದೆ. ಜಾನಪ‍ದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ ಕಲಾಕೃತಿಗ ಪ್ರದರ್ಶನಕ್ಕೆ ಕೂಡ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯಲಿದೆ‘ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

* ವಿವಿಧ ಅಕಾಡೆಮಿ, ಪ್ರಾಧಿಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಒಟ್ಟಾಗಿ ‘ಕಲಾಗ್ರಾಮೋತ್ಸವ’ ನಡೆಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಅನುಮತಿ ಪಡೆದು ನಡೆಸಲಾಗುತ್ತದೆ.

- ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT