ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರ್ ಜಾ ಮೋದಿ’ ಎಂದವರು ಯಾರು? ಮೋದಿ ಬಹಿರಂಗಪಡಿಸಲಿ: ಸಿದ್ದರಾಮಯ್ಯ

Last Updated 3 ಮಾರ್ಚ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮರ್‌ ಜಾ ಮೋದಿ, ಮರ್‌ ಜಾ ಮೋದಿ’ ಎಂದು ಘೋಷಣೆ ಕೂಗಿದ್ದು ಯಾರು ಎಂಬುದನ್ನು ಅವರೇ ಬಹಿರಂಗಪಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸಾಧನೆಗಳ ಆಧಾರದಲ್ಲಿ ಮತ ಯಾಚಿಸಲಾಗದೆ ಪ್ರಧಾನಿ ಮೋದಿಯವರು ‘ಮರ್ ಜಾ ಮೋದಿ’ ಎಂದು ಕಾಂಗ್ರೆಸ್ ನವರು ಘೋಷಣೆ ಕೂಗುತ್ತಿದ್ದಾರೆ ಎಂದು ಅನುಕಂಪ ಗಳಿಸಲು ನಾಟಕ ಮಾಡುತ್ತಿರುವುದು ದುರದೃಷ್ಟಕರ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮರ್ ಜಾ ಮೋದಿ ಎಂದು ಯಾರು? ಎಲ್ಲಿ? ಕೂಗಿದ್ದರು ಎನ್ನುವುದನ್ನು ಮೋದಿಯವರು ಬಹಿರಂಗಪಡಿಸಬೇಕು. ಗುಪ್ತಚರ, ಪೊಲೀಸ್, ತನಿಖಾ ಸಂಸ್ಥೆಗಳು ಎಲ್ಲವೂ ಕೈಯಲ್ಲಿರುವಾಗ ಸಾಯಲು ಹೇಳಿದವರನ್ನು ಎಳೆದು ತಂದು ಜೈಲಿಗೆ ಹಾಕಲು ಏನು ಅಡ್ಡಿ ಇದೆ?’ ಎಂದು ಪ್ರಶ್ನಿಸಿದ್ದಾರೆ.

‘ಈ ದೇಶದಲ್ಲಿ ಒಬ್ಬ ಪ್ರಧಾನಿಗೆ ರಕ್ಷಣೆ ಇಲ್ಲ ಎಂದಾದರೆ ಇನ್ನು ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಇನ್ನು ಯಾಕೆ ಮರ್ ಜಾ ಮೋದಿ ಎಂದು ಕೂಗಿದರವರ ಮೇಲೆ ಕ್ರಮ ತೆಗೆದುಕೊಂಡಿಲ್ಲ? ಇವೆಲ್ಲ ಅನುಕಂಪ ಗಳಿಸಲು ಮಾಡುತ್ತಿರುವ ಗಿಮಿಕ್‌ಗಳಷ್ಟೆ. ಜನರು ಮೂರ್ಖರಲ್ಲ, ಅವರಿಗೆ ಈ ನಾಟಕ ಅರ್ಥವಾಗುತ್ತದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ಟಿಪ್ಪುವಿನಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಹತ್ಯೆಗೆ ಪ್ರಚೋದಿಸಿದ್ದ ಸಚಿವ ಅಶ್ವತ್ಥನಾರಾಯಣ ಅವರಿಗೆ ಮೋದಿಯವರು ತಲೆಗೆ ಕುಟ್ಟಿ ಬುದ್ದಿ ಹೇಳಬಹುದು ಎಂದು ಅಂದ್ಕೊಂಡಿದ್ದೆ. ಆದರೆ ಅವರು ತನ್ನನ್ನು ‘ಮರ್ ಜಾ’ ಎಂದು ಹೇಳುತ್ತಿದ್ದಾರೆ ಎಂದು ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

‘ಗುಜರಾತ್ ಗಲಭೆ ನಿಯಂತ್ರಿಸಲಾಗದ ಮೋದಿಯವರನ್ನು ಕಿತ್ತುಹಾಕಲು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ಆಗ ಇವರನ್ನು ರಕ್ಷಿಸಿದ್ದು ಎಲ್‌.ಕೆ.ಅಡ್ವಾಣಿ. ಅಂತಹ ಹಿರಿಯನನ್ನೇ ಮೂಲೆಗೆ ತಳ್ಳಿರುವ ಮೋದಿಯವರಿಗೆ ಇತರರಿಗೆ ಉಪದೇಶ ಮಾಡುವ ಯಾವ ನೈತಿಕತೆ ಇದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಬಿಜೆಪಿಯಲ್ಲಿಯೇ ಮೋದಿಯವರು ಕಡೆಗಣಿಸಿದ ನಾಯಕರು ಒಬ್ಬರ? ಇಬ್ಬರ? ಅಟಲಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಮಾತ್ರವಲ್ಲ ತಮ್ಮದೇ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರಿಗೆ ಮೋದಿಯವರು ಮಾಡಿದ್ದ ಅವಮಾನ ಏನು ಕಡಿಮೆಯೇ?’ ಎಂದು ಕಿಚಾಯಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಎನ್ನುವುದು ನೆನಪಿರಲಿ. ಕೊನೆಗೆ ಅವರು ಪಕ್ಷವನ್ನೇ ಬಿಟ್ಟುಹೋಗುವಂತೆ ಮಾಡಿದ್ದು ಯಾರು? ಪಕ್ಷ ತೊರೆದು ಹೋದ ಅವರನ್ನು ತುಚ್ಚೀಕರಿಸಿ ಹಿಂಸಿಸಿದ್ದು ಯಾರು? ಅವರೆಲ್ಲರೂ ಮೋದಿಯವರ ಶಿಷ್ಯರೇ ಅಲ್ಲವೇ?’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

‘ಮೋದಿಯವರಿಂದ ಹಿಡಿದು ರಾಜ್ಯದ ಬಿಜೆಪಿ ನಾಯಕರ ವರೆಗೆ ಈಗ ಎಲ್ಲರೂ ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿರುವುದು ಅವರ ಮೇಲಿನ ಪ್ರೀತಿಯಿಂದ ಖಂಡಿತ ಅಲ್ಲ. ಲಿಂಗಾಯತರ ಮತ ಗಳಿಸಲು ಮಾತ್ರ. ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ಲಿಂಗಾಯತ ಸಮುದಾಯಕ್ಕಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿಗೆ ಮತ ತಂದುಕೊಡುವ ಯಾವ ನಾಯಕರ ಮುಖವೂ ಇಲ್ಲ ಎಂದು ಮೋದಿಗೆ ಮನವರಿಕೆಯಾಗಿದೆ. ಅದೇ ರೀತಿ ತನ್ನ ಮುಖ ತೋರಿಸಿದರೂ ಹಿಂದಿನಂತೆ ಜನ ಮತಹಾಕುವುದಿಲ್ಲ ಎನ್ನುವುದು ಖಾತರಿಯಾಗಿದೆ. ಅದಕ್ಕಾಗಿಯೇ ಈ ನಾಟಕ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಕ‌ರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಅನುಕಂಪ ತೋರುತ್ತಿರುವ ಮೋದಿಯವರು ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಸಂಸದರನ್ನು ಹೇಗೆ ನಡೆಸಿಕೊಂಡಿದ್ದಾರೆ? ಅವರೇನು ಕರ್ನಾಟಕದವರಲ್ಲವೇ? ಮೋದಿಯವರು ಅವರನ್ನು ಎಂದಾದರೂ ತಮ್ಮೆದುರು ತಲೆ ಎತ್ತಿ ಮಾತನಾಡಲು ಬಿಟ್ಟಿದ್ದರಾ?’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT