ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election 2023 | ತಳಸಮುದಾಯದ ಕಲಾ ತರಬೇತಿಗೂ ‘ಕಮಲ’ದ ನಂಟು!

Last Updated 26 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ಬೆಂಗಳೂರು: ದಲಿತ ಮತ್ತು ತಳಸಮುದಾಯದ ಕಲಾ ಪ್ರಕಾರಗಳಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ತಮ್ಮ ಸೈದ್ಧಾಂತಿಕ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದು, ಇದಕ್ಕಾಗಿ ‘ಮೂಲ ಸಂಸ್ಕೃತಿ ಮತ್ತು ದಲಿತ ಸಂಸ್ಕೃತಿ’ ಎನ್ನುವ ತರಬೇತಿ ಕಾರ್ಯಕ್ರಮವನ್ನು ಬಳಸಿಕೊಂಡಿದೆ.

ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಮುನ್ನೆಲೆಗೆ ತಂದು ಜನಸಾಮಾನ್ಯರ ಮಧ್ಯೆ ಜನಪ್ರಿಯಗೊಳಿಸಲು ‘ಮೂಲ ಸಂಸ್ಕೃತಿ ಮತ್ತು ದಲಿತ ಸಂಸ್ಕೃತಿ’ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರೂಪಿಸಿ, ಆಯ್ದ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌ ಮತ್ತು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಭಾಗಿಯಾಗಿದ್ದಾರೆ. ಹಿರೇಮನಿ ಈ ಕಾರ್ಯಕ್ರಮದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

₹ 5 ಕೋಟಿ ಅನುದಾನದೊಂದಿಗೆ ಜನವರಿ 23ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ತರಬೇತಿ ಕಾರ್ಯಕ್ರಮ ಆರಂಭಿಸಲಾಗಿದೆ. ಆಯ್ದ 135 ಕಲಾ ತಂಡಗಳಿಗೆ, ಪ್ರತಿ ಜಿಲ್ಲೆಯಲ್ಲಿ ತಲಾ 50 ಜನರಿಗೆ ತರಬೇತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಸಂಘಪರಿವಾರ ದ ಕಾರ್ಯಕರ್ತರೇ ನಡೆಸುತ್ತಿದ್ದಾರೆ. ಅಲ್ಲದೇ, ಸಚಿವ ಸುನಿಲ್‌ಕುಮಾರ್ ಅವರು ಕಾರ್ಯಕ್ರಮದ ಕುರಿತು ಆಗಾಗ್ಗೆ ಪರಿಶೀಲನಾ ಸಭೆಗಳನ್ನೂ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮಾರ್ಚ್‌ 9 ಮತ್ತು 10 ರಂದು ಈ ತರಬೇತಿ ಕಾರ್ಯಾಗಾರದ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ. ಅದರಲ್ಲಿ ತಳಸಮುದಾಯದ ಉಡುಪು, ಆಹಾರ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವೂ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಹಗಲುವೇಷ, ಜೋಗಿಪದ, ಖಾಸಬೇಡರ ಪಡೆ, ಗಣೆವಾದ್ಯ, ಜಡೆ ಕೋಲಾಟ, ಕೀಲುಕುದುರೆ ಇತ್ಯಾದಿಗಳಿಗೆ ಪುನಶ್ಚೇತನ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಪ್ರತಿ ಜಿಲ್ಲೆಗೆ ಈ ಕಾರ್ಯಕ್ರಮ ಆಯೋಜಿಸಲು ₹ 10 ಲಕ್ಷ ತರಬೇತಿಗೆ ಅನುದಾನ ನೀಡಲಾಗಿದೆ. 30 ವರ್ಷದೊಳಗಿನ ಯುವಕರಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಪದವೀಧರರು ಮತ್ತು ಸ್ನಾತಕೋತ್ತರ ಪದವಿ ಮಾಡಿದವರೂ ಇರುವುದು ವಿಶೇಷ.

ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಿಂದ ರಾಜ್ಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾದ 30 ಜಿಲ್ಲೆಗಳ ತಲಾ ಎರಡು ಕಲಾ ತಂಡ ಮತ್ತು ಕಲಾವಿದರನ್ನು ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಆದೇಶ ಹೊರಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಕಾರ್ಯಕ್ರಮದ ಮೂಲಕ ಆರ್‌ಎಸ್‌ಎಸ್‌, ತಳಸಮುದಾಯದಲ್ಲಿ ಮೂಲಸಂಸ್ಕೃತಿ ಹೆಸರಿನಲ್ಲಿ ಹಿಂದುತ್ವದ ಅಜೆಂಡಾ ತುಂಬಲು ಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ವಿ. ಸುನಿಲ್‌ಕುಮಾರ್‌, ‘ಎಲ್ಲದರಲ್ಲೂ ರಾಜಕಾರಣ ಹುಡುಕುವುದು ಕೆಲವರಿಗೆ ಅಭ್ಯಾಸವಾಗಿದೆ. ನಾವು ಮೂಲಸಂಸ್ಕೃತಿಯನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡಿದ್ದೇವೆ. ಬೇರೆ ಯಾವುದೇ ಉದ್ದೇಶವಿಲ್ಲ. ಎಲ್ಲ ಕನ್ನಡಿಗರನ್ನು ಬೆಸೆಯುವ ಕೋಟಿ ಕಂಠ ಗಾಯನವನ್ನೂ ಮಾಡಿದ್ದೀವಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT