ಬೆಂಗಳೂರು: ವಿಧಾನಸಭೆಯ ಕಲಾಪ ಶುಕ್ರವಾರ ಬೆಳಿಗ್ಗೆಗೆ ಮುಂದೂಡಿಕೆಯಾದರೂ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸುತ್ತಿದ್ದಾರೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆ ಹಿಡಿದಿರುವ ಕುರಿತು ಜೆಡಿಎಸ್ ಸದಸ್ಯರು ನಿಯಮ 68ರ ಅಡಿಯಲ್ಲಿ ಚರ್ಚೆ ನಡೆಸಿದ್ದರು. ಉತ್ತರ ನೀಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸರ್ಕಾರ ಕಾಮಗಾರಿಗಳನ್ನು ತಡೆ ಹಿಡಿದಿದೆ ಎಂದರು.
ಉತ್ತರ ವಿರೋಧಿಸಿ ಜೆಡಿಎಸ್ ಸದಸ್ಯರು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಧರಣಿ ಆರಂಭಿಸಿದರು. ಗಮನ ಸೆಳೆಯುವ ಸೂಚನೆಗಳಿಗೆ ಉತ್ತರ ಮಂಡಿಸಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪ ಮುಂದೂಡಿದರು.
ಜೆಡಿಎಸ್ ಶಾಸಕರು ಧರಣಿ ಮುಂದುವರಿಸಿದ್ದಾರೆ. ಅವರು ಅಹೋರಾತ್ರಿ ಧರಣಿ ಮಾಡುವುದಾದರೆ ಊಟ ಮತ್ತು ಹಾಸಿಗೆ ಒದಗಿಸುವಂತೆ ಸ್ಪೀಕರ್ ವಿಧಾನಸಭಾ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಧರಣಿನಿರತರನ್ನು ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ಬಂದಿದ್ದಾರೆ.