‘ಸಂಗಮೇಶ್ವರ ಅವರನ್ನು ಸದನದಿಂದ ಅಮಾನತು ಮಾಡಿ, ಒಳಬರದಂತೆ ತಡೆದಿದ್ದೀರಿ. ಸಮರ್ಥನೆಗೆ ಅವಕಾಶ ಇಲ್ಲದಂತೆ ಮಾಡಿ ಹಕ್ಕುಚ್ಯುತಿ ಮಂಡಿಸುವುದು ಸರಿಯಲ್ಲ. ವಿಧಾನಸಭೆ ಇತಿಹಾಸದಲ್ಲಿ ಸದಸ್ಯರೊಬ್ಬರ ವಿರುದ್ಧ ಈ ರೀತಿ ನಿರ್ಣಯ ಮಂಡಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಮ್ಮ ಪಕ್ಷದ ಸದಸ್ಯರ ಜತೆ ಧರಣಿ ನಡೆಸಿದರು. ಸಭಾಧ್ಯಕ್ಷರ ಪೀಠದ ಮುಂದೆ ಬಂದ ಕಾಂಗ್ರೆಸ್ ಸದಸ್ಯರು, ‘ಆರೆಸ್ಸೆಸ್ ಕೈಗೊಂಬೆ ಸರ್ಕಾರ, ಸಿ.ಡಿ ಸರ್ಕಾರ, ಅಶ್ಲೀಲ ಸರ್ಕಾರ, ರಾಸಲೀಲೆ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿದರು. ಅದಕ್ಕೆ ಪ್ರತಿಯಾಗಿ, ‘ಪಾಕಿಸ್ತಾನ ಕೈಗೊಂಬೆ, ಇಟಲಿ ಕಾಂಗ್ರೆಸ್’ ಎಂದು ಬಿಜೆಪಿಯವರು ತಿರುಗೇಟು ಕೊಟ್ಟರು.