ಬೆಳಗಾವಿ (ಸುವರ್ಣ ವಿಧಾನಸೌಧ): ಅಕ್ರಮ–ಸಕ್ರಮದಡಿಕಂದಾಯ ಜಮೀನು ಮಂಜೂರು ಮಾಡಲು ಯಾವುದೇ ಅಡೆ–ತಡೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮ ಸಕ್ರಮದಡಿ ಕಂದಾಯ ಜಮೀನು ಮಂಜೂರು ಮಾಡಲು ಪರಿಶೀಲನೆಗಾಗಿ ಅರಣ್ಯ ಇಲಾಖೆಗೆ ಯಾವುದೇ ಪ್ರಸ್ತಾವನೆಯನ್ನೂ ಕಳಿಸಿಲ್ಲ– ಕಳುಹಿಸುವುದೂ ಇಲ್ಲ ಭರವಸೆ ನೀಡಿದರು.
‘ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಸಮಿತಿಯನ್ನು ರಚಿಸಲಾಗಿತ್ತು. ಅದರ ಅಧ್ಯಕ್ಷನಾಗಿ ನಾನು 9 ಸಭೆಗಳನ್ನು ನಡೆಸಿದ್ದೇನೆ. ಆದರೆ, ಅಕ್ರಮ ಸಕ್ರಮ ಅರ್ಜಿಗಳ ಸ್ಥಿರೀಕರಣಕ್ಕೆ ಅರಣ್ಯ ಇಲಾಖೆಗೆ ಕಡತಗಳನ್ನು ಕಳುಹಿಸಲಾಗಿದೆ’ ಎಂದು ರಾಜೇಗೌಡ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ, ‘ಇದರ ಪರಿಶೀಲನೆಯನ್ನು ಅರಣ್ಯ ಇಲಾಖೆಯೇ ನಡೆಸಲಿ ಎಂದು ಉಲ್ಲೇಖಿಸಿ ನಿಮ್ಮ ಕಡೆಯಿಂದಲೇ ಕಡತಗಳು ಹೋಗಿವೆ’ ಎಂದರು.
ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94 ಎ, 94 ಬಿ ಮತ್ತು 94 ಎ(4) ಅಡಿ ಅರಣ್ಯ ಭೂಮಿಯಲ್ಲಿನ ಯಾವುದೇ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿಲ್ಲ. ಆದರೆ, ಸಮಿತಿಯು ಸೂಚಿಸುವ ಪ್ರಕರಣಗಳಲ್ಲಿ ಸಾಗುವಳಿ ಚೀಟಿ ನೀಡಲು ಯಾವುದೇ ತೊಂದರೆಗಳಿರುವುದಿಲ್ಲ ಎಂದು ಅಶೋಕ ಹೇಳಿದರು.
ಪೋಸ್ಟ್ಮನ್ ಮೂಲಕ ಪಿಂಚಣಿ: ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಇನ್ನುಮುಂದೆ ಪೋಸ್ಟ್ಮನ್ಗಳ ಮೂಲಕವೇ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ್ ಅವರ ಪ್ರಶ್ನೆಗೆ ಉತ್ತರಿಸಿದರು.