ಬೆಂಗಳೂರು: ಯುವ ಕಾಂಗ್ರೆಸ್ನ ರಾಷ್ಟ್ರ ಘಟಕದ ಅಧ್ಯಕ್ಷ ಶ್ರೀನಿವಾಸ ಬಿ.ವಿ ಅವರು ಪೊಲೀಸರನ್ನು ಕಂಡು ಓಡಿ ಹೋಗುವ ವಿಡಿಯೊವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ಸಿಗರ ಪ್ರತಿಭಟನೆಯನ್ನು ವ್ಯಂಗ್ಯವಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯು ಶ್ರೀನಿವಾಸ ಬಿ.ವಿ ಅವರ ವಿಡಿಯೊವನ್ನು ಹಂಚಿಕೊಂಡಿದೆ. ಶ್ರೀನಿವಾಸ ಅವರು ಕಾರಿನಿಂದ ಇಳಿದು ಬರುವುದು, ಪೊಲೀಸ್ ಅಧಿಕಾರಿ ಅವರ ಬಳಿಗೆ ತೆರಳಿ ಹೆಗಲ ಮೇಲೆ ಕೈ ಇಡುತ್ತಲೇ ಏಕಾಏಕಿ ಓಡುವುದು ವಿಡಿಯೊದಲ್ಲಿದೆ. ಇದನ್ನು ಹಂಚಿಕೊಂಡು ಕಾಂಗ್ರೆಸ್ ಅನ್ನು ಬಿಜೆಪಿ ಗೇಲಿ ಮಾಡಿದೆ.
‘ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು. ಇ.ಡಿ ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಐವೈಸಿ (ಯುವ ಕಾಂಗ್ರೆಸ್) ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ. ಪಲಾಯವಾದವೇ ಇವರ ಬಂಡವಾಳ’ ಎಂದು ಅದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಆದರೆ, ಶ್ರೀನಿವಾಸ್ ಅವರ ಈ ವಿಡಿಯೊ ಯಾವ ಸಂದರ್ಭದ್ದು ಎಂಬುದು ಖಚಿತವಾಗಿಲ್ಲ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಇ.ಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು.
ಇಡಿ ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಐವೈಸಿ ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ.