ಉಡುಪಿ: ವಿರೋಧ ಪಕ್ಷಗಳು ನಿದ್ರೆ ಮಾಡುತ್ತಿರುವ ಸಿಂಹವನ್ನು ನಂಬುವ ಸಂಸ್ಕೃತಿ ಪಾಲಿಸಿಕೊಂಡು ಬಂದಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲತೆಗೆ ತಕ್ಕಂತೆ ಬಿಜೆಪಿಯು ಸಶಕ್ತ ಹಾಗೂ ಘರ್ಜನಾ ರೂಪದಲ್ಲಿರುವ ಸಿಂಹವನ್ನು ನಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಲಾಂಛನವನ್ನು ವಿರೋಧ ಪಕ್ಷಗಳು ಹಾಗೂ ಬಿಜೆಪಿ ನೋಡುವ ದೃಷ್ಟಿಕೋನಗಳು ಬೇರೆ. ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿರುವ ಸಿಂಹದ ಮಾದರಿಯಂತೆಯೇ ರಾಷ್ಟ್ರಲಾಂಛನವನ್ನು ನಿರ್ಮಿಸಲಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.
ಆದರೆ, ವಿರೋಧ ಪಕ್ಷಗಳು ರಾಷ್ಟ್ರಲಾಂಛನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಸಿಂಹ ಉಗ್ರವಾಗಿದೆ, ವ್ಯಘ್ರವಾಗಿದೆ ಎಂದು ಹೇಳಿಕೆ ನೀಡುತ್ತ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.