ಬೆಂಗಳೂರು: ತಮ್ಮ ಸಂಪುಟಕ್ಕೆ ಸೇರ್ಪಡೆಯಾಗಿರುವ 29 ಸಚಿವರಿಗೆ ನಾಳೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ನೂತನ ಸಚಿವರಿಗೆ ಖಾತೆ ಹಂಚಿಕೆ ನಾಳೆ ಪೂರ್ಣಗೊಳ್ಳಲಿದೆ’ ಎಂದು ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ವಾರದ ನಂತರ, ಬೊಮ್ಮಾಯಿ ಬುಧವಾರ ತಮ್ಮ ಸಂಪುಟಕ್ಕೆ 29 ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದರು.
ಅದರಲ್ಲಿ 23 ಮಂದಿ ಹಿಂದಿನ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರಾಗಿದ್ದು, 6 ಮಂದಿ ಹೊಸಬರಾಗಿದ್ದಾರೆ. ಕೆಲವು ಮಂತ್ರಿಗಳು ಹಿಂದಿನ ಕ್ಯಾಬಿನೆಟ್ನಲ್ಲಿ ತಾವು ಹೊಂದಿದ್ದ ಖಾತೆಗಳನ್ನು ಉಳಿಸಿಕೊಳ್ಳಲು ಆಶಿಸುತ್ತಿದ್ದಾರೆ. ಇನ್ನೂ ಕೆಲವರು ದೊಡ್ಡ ಖಾತೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ನಿರ್ದಿಷ್ಟ ಖಾತೆಯ ಅಪೇಕ್ಷೆ ಇಲ್ಲ. ಸಿಎಂ ಮತ್ತು ಪಕ್ಷದ ನಾಯಕತ್ವದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆಎಂದು ಹೇಳಿದ್ದಾರೆ.
ಸಚಿವ ಪ್ರಭು ಚೌಹಾಣ್ ಅವರು, ಕಳೆದ ಸಂಪುಟದಲ್ಲಿ ನಿರ್ವಹಿಸಿದ್ದ ಪಶುಸಂಗೋಪನಾ ಇಲಾಖೆಯನ್ನು ಮರಳಿ ಪಡೆಯಲು ನೋಡುತ್ತಿದ್ದಾರೆ,
‘ಇಲಾಖೆಯಲ್ಲಿ ಕೆಲಸಗಳು ಅರ್ಧಕ್ಕೆ ನಿಂತಿವೆ. ನಾನು ಮಂತ್ರಿಯಾಗಿ ಗೋಹತ್ಯೆ ವಿರೋಧಿ ಕಾನೂನನ್ನು ಪರಿಚಯಿಸಿದೆನು.ಗೋಶಾಲಾ, ಪಶು ಸಹಾಯವಾಣಿ ಸ್ಥಾಪಿಸುತ್ತಿದ್ದೇವೆ. ಆದ್ದರಿಂದ ಪಶುಸಂಗೋಪನೆ ಇಲಾಖೆ ನನ್ನ ಆದ್ಯತೆಯಾಗಿದೆ. ಆದರೆ, ನನಗೆ ಬೇರೆ ಯಾವುದೇ ಖಾತೆ ನೀಡಿದರೂ ನಿರ್ವಹಿಸುತ್ತೇನೆ’ ಅವರು ಹೇಳಿದ್ದಾರೆ.
ಹಿಂದಿನ ಕ್ಯಾಬಿನೆಟ್ನಲ್ಲಿ ಕೃಷಿ ಖಾತೆಯನ್ನು ಹೊಂದಿದ್ದ ಸಚಿವ ಬಿ ಸಿ ಪಾಟೀಲ್ ಅವರು ಇಲಾಖೆಯಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಅದೇ ಖಾತೆಯನ್ನು ಉಳಿಸಿಕೊಳ್ಳಲು ಬಯಸುತ್ತೇನೆ, ಆದರೆ ಸಿಎಂ ಬೇರೆ ಯಾವುದೇಖಾತೆ ಹಂಚಿಕೆ ಮಾಡಿದರೂಸಂತೋಷದಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.