ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ‘ರೊ–ರೊ ರೈಲು’ ಸೇವೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ

ಇನ್ನು ಬೆಂಗಳೂರು– ಸೋಲಾಪುರ ಮಧ್ಯೆ ಟ್ರಕ್‌, ಸರಕು ಸಾಮಗ್ರಿ ಶೀಘ್ರ ಸಾಗಣೆ
Last Updated 30 ಆಗಸ್ಟ್ 2020, 5:09 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ‘ರೊ-ರೊ ರೈಲು’ (ರೋಲ್ ಆನ್ ರೋಲ್ ಆಫ್ ರೈಲು) ಸೇವೆಯ ಚೊಚ್ಚಲ ಪ್ರಯಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾನುವಾರ ಹಸಿರು ನಿಶಾನೆ ತೋರಿಸಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ, ‘ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಾರಿಗೆ ಪ್ರಕಾರಗಳನ್ನು ಒಗ್ಗೂಡಿಸುವ ಮಲ್ಟಿ ಮಾಡೆಲ್‌ ಟ್ರಾನ್ಸ್‌ಪೋರ್ಟ್ ಸಿಸ್ಟಂನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಅವರ ಆಶಯದ ಫಲವಾಗಿ ಈ ಸೇವೆ ಆರಂಭಗೊಳ್ಳುತ್ತಿದೆ’ ಎಂದರು.

‘ಸರಕು ಸಾಮಾನು ಸಹಿತವಾದ ಅಥವಾ ಖಾಲಿ ಇರುವ 42 ಟ್ರಕ್‍ಗಳನ್ನು ರೊ-ರೊ ರೈಲಿನಲ್ಲಿ ಸಾಗಿಸಬಹುದಾಗಿದೆ. ನೆಲಮಂಗಲ ಹಾಗೂ ಬಾಲೆಯಲ್ಲಿ ಈ ಟ್ರಕ್‍ಗಳನ್ನು ರೈಲಿಗೆ ಹತ್ತಿಸುವ ಹಾಗೂ ರೈಲಿಗೆ ಇಳಿಸುವ ಕಾರ್ಯ ನಡೆಯಲಿದೆ. ರಸ್ತೆ ಮೂಲಕ ಸಂಚರಿಸುವ ಟ್ರಕ್‍ಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಟ್ರಕ್‍ಗಳನ್ನು ಹಾಗೂ ಸರಕು ಸಾಮಗ್ರಿಗಳನ್ನು ಈ ಎರಡು ನಗರಗಳ ನಡುವೆ ಶೀಘ್ರದಲ್ಲಿ ಸಾಗಣೆ ಮಾಡಬಹುದಾಗಿದೆ’ ಎಂದೂ ಅವರು ಹೇಳಿದರು.

‘ಗೋದಾಮುಗಳಿಂದ ಅಥವಾ ಮಾರುಕಟ್ಟೆಯಿಂದ ಲೋಡ್ ಆದ ಟ್ರಕ್‍ಗಳು ರೈಲ್ವೆ ನಿಲ್ದಾಣದಲ್ಲಿ ಬಂದು ರೈಲಿನಲ್ಲಿ ಲೋಡ್ ಆಗುತ್ತವೆ. ರೈಲುಗಳ ಮೂಲಕ ಈ ಟ್ರಕ್‍ಗಳು ಮತ್ತೊಂದು ನಗರಕ್ಕೆ ಬಂದು ಸಾಮಾನು ಸರಂಜಾಮುಗಳೊಂದಿಗೆ ಗೋದಾಮು ಅಥವಾ ಮಾರುಕಟ್ಟೆಗೆ ಹೋಗಿ ಹೊತ್ತು ತಂದ ಸಾಮಾನುಗಳನ್ನು ಅನ್‍ಲೋಡ್ ಮಾಡಲು ಈ ವ್ಯವಸ್ಥೆಯಿಂದ ಸಹಕಾರಿಯಾಗುತ್ತದೆ. ಒಂದು ರೊ-ರೊ ರೈಲಿನಲ್ಲಿ ಸರಕು ಹಾಗೂ ಟ್ರಕ್‌ಳೆರಡರ ಭಾರವು ಸೇರಿ 1,260 ಟನ್ ಸಾಗಿಸಬಹುದಾಗಿದೆ. ಈ ವ್ಯವಸ್ಥೆ ಪರಿಸರ ಸ್ನೇಹಿಯಾಗಿದ್ದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಟ್ರಕ್‍ಗಳ ದೀರ್ಘ ಬಾಳಿಕೆಗೆ ಸಹಕಾರಿಯಾಗುತ್ತದೆ’ ಎಂದರು.

‘ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ ಅಡಿಕೆ ತೋಟಗಾರಿಕೆ ಉತ್ಪನ್ನಗಳು ಕೈಗಾರಿಕಾ ಉತ್ಪನ್ನಗಳನ್ನು ಸೋಲಾಪುರಕ್ಕೆ ಸಾಗಿಸಲು ಹಾಗೂ ಸೋಲಾಪುರದಿಂದ ಈರುಳ್ಳಿ, ಬೇಳೆ ಕಾಳುಗಳು ಮುಂತಾದ ಸರಕುಗಳನ್ನು ಬೆಂಗಳೂರಿಗೆ ಸಾಗಿಸಲು ಇದರಿಂದ ನೆರವಾಗಲಿದೆ. ನೆಲಮಂಗಲದ ಹತ್ತಿರ ಇರುವ ಎಪಿಎಂಸಿ ಮಾರುಕಟ್ಟೆ, ಪೀಣ್ಯ ಹಾಗೂ ನೆಲಮಂಗಲ ಭಾಗದಲ್ಲಿರುವ ಅನೇಕ ಕೈಗಾರಿಕೆಗಳು ಹಾಗೂ ಸಾರಿಗೆ ಸಂಸ್ಥೆಗಳು ಇದರಿಂದ ಅನುಕೂಲ ಹೊಂದಲಿವೆ. ಈ ಮೊದಲು ಕೊಂಕಣ್ ರೈಲ್ವೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೊ-ರೊ ಸೇವೆಯನ್ನು ಬೆಂಗಳೂರು ಮತ್ತು ಸೋಲಾಪುರದ ಮಧ್ಯೆ ಆರಂಭಿಸಲಾಗುತ್ತಿದೆ’ ಎಂದರು.

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ. ಕಂದಾಯ ಸಚಿವ ಆರ್. ಅಶೋಕ, ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT