ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ಐಸಿಟಿ) ಬಳಕೆಗಾಗಿ ಕರ್ನಾಟಕದ ಕೋವಿಡ್ -19 ವಾರ್ ರೂಮ್ಗೆ ಕೇಂದ್ರದ ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಹೈದರಾಬಾದ್ನಲ್ಲಿ ನಡೆದ ಇ–ಆಡಳಿತದ 26ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಕೋವಿಡ್ -19 ವಾರ್ ರೂಮ್ನ ಹಿಂದಿನ ರೂವಾರಿ ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
‘ನಾವು ತಂತ್ರಜ್ಞಾನ ಓಳಗೊಂಡ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಕರ್ನಾಟಕ ಸರ್ಕಾರವು ಅರಿತುಕೊಂಡಿದೆ. ಸರ್ಕಾರ ಮತ್ತು ಇತರ ಎಲ್ಲ ವ್ಯವಸ್ಥೆಯನ್ನು ಬೆಂಬಲಿಸುವುದು ನಮ್ಮ ಕೆಲಸ. ಇಲ್ಲಿ ಕೆಲಸ ಮಾಡುವ ಜನರು ಹೆಚ್ಚು ಪರಿಣಾಮಕಾರಿಯಾಗಿರಲು ನಾವು ಸಮಗ್ರ ಬೆಂಬಲ ವ್ಯವಸ್ಥೆಯನ್ನು ಒದಗಿಸುತ್ತೇವೆ’ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು, ಮೌದ್ಗಿಲ್ ಅವರನ್ನು ಅಭಿನಂದಿಸಿದ್ದು, ‘ನಮ್ಮದು ಸಂಪೂರ್ಣ ಸುಸಜ್ಜಿತ ವಾರ್ ರೂಮ್ ಆಗಿದೆ. ಕರ್ನಾಟಕದ ತಂತ್ರಜ್ಞಾನ ಚಾಲಿತ ಕೋವಿಡ್ ನಿರ್ವಹಣೆಯು ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದಿದ್ದಾರೆ.