ವಿಜಯಪುರ: ಕಾಂಗ್ರೆಸ್ ಪಾರ್ಟಿಯ ಭಾಷೆ ಹಾಗೂ ಪಾಕಿಸ್ತಾನದ ಭಾಷೆ ಒಂದೇ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದಾಗ ಅದನ್ನು ಕಾಂಗ್ರೆಸ್ ಪಕ್ಷ ಹಾಗೂ ಪಾಕಿಸ್ತಾನ ಕರಾಳ ದಿನ, ಕಪ್ಪು ದಿನವೆಂದು ಹೇಳಿತ್ತು ಎಂದರು.
ಭಾರತದ ಸಂವಿಧಾನ ಇಕ್ಕಟ್ಟಿನಲ್ಲಿ ಸಿಲುಕಿದೆ ಎಂದು ವಿದೇಶದಲ್ಲಿ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ವಿದೇಶಗಳ ಮೇಲೆ ಬಹಳ ವಿಶ್ವಾಸವಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗ ಅಮೆರಿಕಾದವರು ಹಾಗೂ ಯುರೋಪಿಯನ್ ಯೂನಿಯನ್ ಅವರು ಭಾರತದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂದು ಹೇಳಿದ್ದಾರೆ ಎಂದರು.
ಭಾರತ ಪ್ರಜಾಸತಾತ್ಮಕ ದೇಶವಾಗಿದ್ದು, ಸ್ವತಂತ್ರ ಗಣರಾಜ್ಯ. ದೇಶದಲ್ಲಿ 35 ವರ್ಷಗಳ ಬಳಿಕ ಒಂದು ಪಕ್ಷಕ್ಕೆ ಬಹುಮತ ಬಂದಿದ್ದು ಬಿಜೆಪಿಗೆ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಸ್ವತಂತ್ರ ಭಾರತದಲ್ಲಿ ಪೂರ್ಣ ಮತ್ತು ಬಹುಮತ ಬಂದಿದ್ದು ಬಿಜೆಪಿಗೆ. ಅದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಹುಮತ ಬಂದಿದೆ. ಇದರ ಅರ್ಥ ಏನೆಂದರೆ ಜನರು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ ಎಂಬುದಾಗಿ ಎಂದು ಹೇಳಿದರು.
ನಮ್ಮ ಪ್ರಧಾನಿ ಮೋದಿಯವರು ಎಲೆಕ್ಟೆಡ್ ಲೀಡರ್, ಇವರ ಹಾಗೆ ಸೆಲೆಕ್ಟೆಡ್ ಲೀಡರ್ ಅಲ್ಲ. ಸೆಲೆಕ್ಟೆಡ್ ಲೀಡರ್ಗಳು, ಜನರು ಪ್ರೀತಿಯಿಂದ ಎಲೆಕ್ಟ್ ಮಾಡಿದ ಲೀಡರ್ಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
‘ಕಾಂಗ್ರೆಸ್ ವಿನಂತಿಯ ಮೇರೆಗೆ ಮುಂದಿನ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ’ ಎಂದು ಎಸ್ಡಿಪಿಐ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಕಾರಣ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಅವರು ಸ್ಪರ್ಧೆಯಿಂದ ಹಿಂದೆ ಸೇರುವುದಾಗಿ ಹೇಳಿದ್ದಾರೆ ಎಂದರು.
ಎಸ್ಡಿಪಿಐ ಹಾಗೂ ಪಿ ಎಫ್ ಐ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಹೊರಟಿರೋದು ಖಂಡನೀಯ ಎಂದರು.
ಒಂದೆಡೆ ಪಿಎಫ್ಐ ಹಾಗೂ ಎಸ್ಡಿಪಿಐ ಬ್ಯಾನ್ ಮಾಡುವ ಮೂಲಕ ಜಗತ್ತಿನ ವೇದಿಕೆಯಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನಿ ಪ್ರೇರಿತ ಉಗ್ರವಾದವನ್ನ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಪಾರ್ಟಿ ಅವರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.