ಬೆಳಗಾವಿ: ₹ 3,577 ಕೋಟಿ ಮೊತ್ತದ ಎರಡನೇ ಪೂರಕ ಅಂದಾಜಿನ 'ಕರ್ನಾಟಕ ಧನ ವಿನಿಯೋಗ ಮಸೂದೆ'ಯನ್ನು ವಿಧಾನ ಪರಿಷತ್ನಲ್ಲಿ ಧ್ವನಿ ಮತದ ಮೂಲಕ ಶುಕ್ರವಾರ ಅಂಗೀಕರಿಸಲಾಯಿತು.
ಮಸೂದೆ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪ್ರಸಕ್ತ ಸಾಲಿನಲ್ಲಿ ಗುರಿ ಮೀರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ನವೆಂಬರ್ ಅಂತ್ಯದವರೆಗೆ ಶೇ 67ರಷ್ಟು ತೆರಿಗೆ ಸಂಗ್ರಹವಾಗಿದೆ’ ಎಂದರು.
‘ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಆದರೆ, ಕೋವಿಡ್ನಿಂದ ಎರಡು ವರ್ಷ ಹದಗೆಟ್ಟಿರುವ ಹಣಕಾಸು ಸ್ಥಿತಿ ಸುಧಾರಣೆಯಾಗಲು ಇನ್ನಷ್ಟು ಸಮಯ ಬೇಕಾಗಿದೆ’ ಎಂದರು.
‘ನಾನು ಸಮಸ್ಯೆಯ ಭಾಗವಾಗಲು ಇಚ್ಚಿಸುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಅವರು ಭರವಸೆ ನೀಡಿದರು.