ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ದಾಖಲಾಗಿರುವ ಸಾಗರೋತ್ತರ ಭಾರತೀಯ ನಾಗರಿಕರ (ಒಸಿಐ) ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳನ್ನು ಭಾರತೀಯ ನಾಗರಿಕರಂತೆ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ಮಾಡಿರುವುದನ್ನು ರದ್ದುಪಡಿಸಿದ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಎಸ್. ಸಂಜಯ್ಗೌಡ ಒಳಗೊಂಡ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಕೇಂದ್ರದ ಪೌರತ್ವ ಕಾಯ್ದೆಗೆ ರಾಜ್ಯ ಕಾನೂನು ಮಣಿಯಬೇಕು ಎಂದು ತಿಳಿಸಿತು.
ಒಸಿಐ ಕಾರ್ಡುದಾರರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ‘ನೀಟ್ ಪರೀಕ್ಷೆಯಲ್ಲಿ ತಮ್ಮ ಶ್ರೇಯಾಂಕದ ಆಧಾರದ ಮೇಲೆ ಸರ್ಕಾರಿ ಕೋಟಾ ಸೀಟುಗಳು ಸೇರಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ಆನ್ಲೈನ್ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅನುಮತಿ ನೀಡಬೇಕು’ ಎಂದು ವಿದ್ಯಾರ್ಥಿಗಳು ಕೋರಿದರು.
ಅರ್ಜಿದಾರರ ಕೋರಿಕೆ ಆಧರಿಸಿ ಅನುಮತಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನ್ಯಾಯಪೀಠ ನಿರ್ದೇಶನ ನೀಡಿತು. ‘ವಸುದೈವ ಕುಟುಂಬಕಂ ಎಂಬ ಪ್ರಾಚೀನ ಭಾರತೀಯರ ಚಿಂತನೆಯನ್ನು ನೆನಪಿಸಲು ಬಯಸುತ್ತೇವೆ. ಇದರರ್ಥ ಜಗತ್ತೇ ಒಂದು ಕುಟುಂಬ’ ಎಂದು ತಿಳಿಸಿತು.