ಬೆಂಗಳೂರು: ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (ಪಿಐಎಲ್) ಕ್ಷುಲ್ಲಕ ಅಥವಾ ವೈಯುಕ್ತಿಕ ಹಿತಾಸಕ್ತಿಗಳೇನಾದರೂ ಅಡಗಿರುವುದು ಮೇಲ್ನೋಟಕ್ಕೆ ಋಜುವಾತು ಆದರೆ, ಅರ್ಜಿದಾರರಿಗೆ ಕನಿಷ್ಠ ₹ 50 ಸಾವಿರ ದಂಡ ವಿಧಿಸಲಾಗುವುದು‘ ಎಂದು ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್ ಪಡೆಯಲು ಸಲ್ಲಿಸಲಾಗಿದ್ದ ಮೆಮೊಗಳನ್ನು (ಜ್ಞಾಪನಾ ಪತ್ರ) ಗಮನಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಜುಜುಬಿ ಅರ್ಜಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಇದೇ 11ರಿಂದ ಜಾರಿಗೆ ತರಲಾಗುವುದು‘ ಎಂದು ತಿಳಿಸಿದೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ನ್ಯಾಯದ ಹಿತದೃಷ್ಟಿಯಿಂದ ಅರ್ಜಿ ವಾಪಸ್ ಪಡೆದುಕೊಳ್ಳಲು ಅನುಮತಿ ನೀಡಬೇಕು’ ಎಂದು ಮೆಮೊ ಸಲ್ಲಿಸಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ವಕೀಲರನ್ನು ತರಾಟೆಗೆ ತೆಗೆದುಕೊಂಡು, ಅರ್ಜಿದಾರರಿಗೆ ₹ 25 ಸಾವಿರ ದಂಡ ವಿಧಿಸಿತು. ‘ನ್ಯಾಯದ ಹಿತದೃಷ್ಟಿಯಿಂದಲೇ ದಂಡದ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಿ, ಒಂದಿಷ್ಟು ಜನರಿಗೆ ಅನುಕೂಲವಾಗುತ್ತದೆ’ ಎಂದು ಆದೇಶಿಸಿತು.