ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ಮಂಡನೆ ವಿಷಯದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಜೆಡಿಎಸ್ ಅದಕ್ಕೆ ಪ್ರತಿಯಾಗಿ ಸಭಾಪತಿ ಸ್ಥಾನಕ್ಕೆ ಬೇಡಿಕೆ ಮುಂದಿಟ್ಟಿದೆ.
‘ಮೇಲ್ಮನೆಯ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಲಿದ್ದಾರೆ’ ಎಂದು ಜೆಡಿಎಸ್ನ ಹಿರಿಯ ನಾಯಕರೊಬ್ಬರು ತಿಳಿಸಿದರು.
ಈಗಿನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮತ್ತು ಅವರ ಕುಟುಂಬ ದೇವೇಗೌಡ ಅವರಿಗೆ ನಿಷ್ಠರಾಗಿರುವುದರಿಂದ ಅವರು ಹುದ್ದೆ ಬಿಟ್ಟು ಕೊಡಲು ಯಾವುದೇ ತಕರಾರು ಮಾಡುವ ಸಾಧ್ಯತೆ ಇಲ್ಲ ಎಂದೂ ಜೆಡಿಎಸ್ ಮೂಲಗಳು ತಿಳಿಸಿವೆ.
ಸಭಾಪತಿ ಬಗ್ಗೆ ಮಾತುಕತೆ ಆಗಿಲ್ಲ: ‘ಪ್ರತಾಪಚಂದ್ರ ಶೆಟ್ಟಿ ಪದಚ್ಯುತಿ ಬಳಿಕ ಯಾರನ್ನು ಸಭಾಪತಿ ಮಾಡಬೇಕು ಮತ್ತು ಜೆಡಿಎಸ್ಗೆ ಆ ಸ್ಥಾನ ನೀಡಬೇಕೆ ಎಂಬ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಅವಿಶ್ವಾಸ ನಿರ್ಣಯ ಮಂಡನೆಯಾಗಿ ಸಭಾಪತಿ ಪದಚ್ಯುತಿ ಬಳಿಕ ಆ ಬಗ್ಗೆ ನಿರ್ಧರಿಸಲಾಗುವುದು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.