ಬೆಂಗಳೂರು: ‘ಸ್ವಯಂ ಪ್ರೀತಿ ಸ್ವಾರ್ಥವಲ್ಲ. ನಾವು ನಮ್ಮನ್ನು ಅರಿತುಕೊಳ್ಳುವ ಬಗೆ. ಮಹಿಳೆಯರು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಇಲ್ಲದಿದ್ದರೆ ಇತರರು ಅವರನ್ನು ಪ್ರೀತಿಸುವುದಿಲ್ಲ’ ಎಂದು ಕವಯತ್ರಿ ಸುಧಾ ಶರ್ಮ ಚವತ್ತಿ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ಸಂಚಲನ’ ವೆಬಿನಾರ್ನಲ್ಲಿ ‘ಸ್ವಯಂ ಪ್ರೀತಿ’ ಕುರಿತು ಉಪನ್ಯಾಸ ನೀಡಿದರು.
‘ಪ್ರೀತಿ ಎಂಬುದು ಮಧುರವಾದ ಭಾವನೆ. ಸ್ವಯಂ ಪ್ರೀತಿ ಹಾಗೂ ಸಮರ್ಥನೆ ಎರಡೂ ವಿಭಿನ್ನವಾದುವು. ಬಹಳ ಸಂದರ್ಭಗಳಲ್ಲಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಇದರಿಂದ ಹೊಸತನ್ನು ಕಲಿಯಲು ಆಗುವುದಿಲ್ಲ. ಎಲ್ಲರೂ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಅದರಿಂದ ಸ್ವಯಂ ಪ್ರೀತಿ ಬೆಳೆಯುತ್ತದೆ. ನಮ್ಮ ತನವನ್ನು ಪ್ರೀತಿಸುವಾಗ ನಮ್ಮ ದೋಷ ಹಾಗೂ ಮಿತಿಗಳ ಅರಿವೂ ಇರಬೇಕು’ ಎಂದರು.
‘ನಮ್ಮ ಮೇಲೆ ನಮಗೆ ಪ್ರೀತಿ, ಭರವಸೆ, ವಿಶ್ವಾಸ ಇದ್ದಾಗ ಸಮರ್ಥಿಸಿಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಮಹಿಳೆಯರು ಪ್ರತಿನಿತ್ಯ ಒಂದಿಲ್ಲೊಂದು ಸವಾಲು ಎದುರಿಸಬೇಕಾಗುತ್ತದೆ.ನನ್ನಿಂದ ಇದು ಸಾಧ್ಯ ಎಂಬ ಭಾವನೆ ಬೆಳೆಸಿಕೊಂಡರೆ ಎಲ್ಲಾ ಸವಾಲುಗಳನ್ನು ಸುಲಭವಾಗಿ ಮೀರಿ ನಿಲ್ಲಬಹುದು’ ಎಂದು ತಿಳಿಸಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ, ಖಜಾಂಚಿರೇಣುಕಾ ದೇಸಾಯಿ, ಕಾರ್ಯದರ್ಶಿ ನಾಗರತ್ನ ಚಂದ್ರಶೇಖರ್, ಉಪಾಧ್ಯಕ್ಷೆ ಆಶಾ ಹೆಗಡೆ ಮತ್ತು ಎಲ್.ಗಿರಿಜಾ ರಾಜ್, ಸಹ ಕಾರ್ಯದರ್ಶಿ ಸರಸ್ವತಿ ನಟರಾಜ್ ಇದ್ದರು.