ಶಿವಮೊಗ್ಗ: ಸೋನಿಯಾ, ರಾಹುಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ವಿಸರ್ಜಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿರುವ ಎಲ್ಲರೂ ಕೆಳಗೆ ಹಾರುತ್ತಿದ್ದಾರೆ. ಹೊಸದಾಗಿ ಪಕ್ಷಕ್ಕೆ ಯಾರೂ ಸೇರಿಕೊಳ್ಳುವುದಿಲ್ಲ. ಸ್ವಾತಂತ್ರ್ಯ ಬಂದಾಗಲೇ ಮಹಾತ್ಮ ಗಾಂಧೀಜಿ ಪಕ್ಷ ವಿಸರ್ಜನೆಗೆ ಸಲಹೆ ನೀಡಿದ್ದರು. ಆಗ ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಈಗ ಆ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕುಟುಕಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವ ಗುಡ್ಡ ಕಡಿದು ಹಾಕಿದ್ದಾರೆ ಎಂದು ಅವರ ಫೋನ್ ಕರೆಗಳ ಕದ್ದಾಲಿಕೆ ಮಾಡಬೇಕು. ಮುಗಿದುಹೋಗಿರುವ ಪಕ್ಷಕ್ಕೆ ತಾವೊಬ್ಬ ಲೀಡರ್ ಎಂದು ತೋರಿಸಿಕೊಳ್ಳಲು ಅವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಛೇಡಿಸಿದರು.