ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಸಂಪುಟ ಪುನಾರಚನೆಯ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ.
ಅರುಣ್ಸಿಂಗ್ ಅವರ ರಾಜ್ಯ ಭೇಟಿಯ ಬೆನ್ನಲ್ಲೇ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡುವ ವಿಚಾರ ಗುರುವಾರ ಬಿಜೆಪಿ ಆಂತರಿಕ ವಲಯದಲ್ಲಿ ದಟ್ಟವಾಗಿ ಹರಿದಾಡಿದೆ.
ನಾಯಕತ್ವದ ಬದಲಾವಣೆಗಿಂತಲೂ ಮೊದಲು ಭಿನ್ನಮತವನ್ನು ಶಮನ ಮಾಡಲು, ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡುವ ಬಗ್ಗೆ ಅರುಣ್ಸಿಂಗ್ ಚಿಂತನೆ ನಡೆಸಿದ್ದಾರೆ. ಅದನ್ನು ಶುಕ್ರವಾರ ನಡೆಯಲಿರುವ ಪಕ್ಷದ ಪ್ರಮುಖರ ಸಭೆಯಲ್ಲೂ ಚರ್ಚಿಸಲಿದ್ದಾರೆ. ಸಚಿವ ಸ್ಥಾನವನ್ನು ಕಳೆದುಕೊಳ್ಳುವವರಿಗೆ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅರುಣ್ಸಿಂಗ್ ಅವರನ್ನು ಇಂದು ಭೇಟಿ ಮಾಡಿದ ಹಲವು ಶಾಸಕರು ನಾಯಕತ್ವ ಬದಲಾವಣೆಗಿಂತ ಸಂಪುಟದಲ್ಲಿ ತಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅವರಲ್ಲಿ ಚಿತ್ರದುರ್ಗದ ತಿಪ್ಪಾರೆಡ್ಡಿ ಪ್ರಮುಖರು.
‘ಸಂಪುಟ ಪುನಾರಚನೆ ಮಾಡಿ ಉತ್ತರಕರ್ನಾಟಕ ಭಾಗಕ್ಕೆ ಸಾಮಾಜಿಕ ನ್ಯಾಯ ನೀಡಿ’ ಎಂದು ಎ.ಎಸ್.ಪಾಟೀಲ ನಡಹಳ್ಳಿ ಬೇಡಿಕೆ ಸಲ್ಲಿಸಿದರು.
ಆಡಳಿತಕ್ಕೆ ಚುರುಕು ನೀಡುವುದರ ಜತೆಗೆ ಶಾಸಕರ ಆಗಬೇಕಾಗಿರುವ ಕೆಲಸಗಳ ಬಗ್ಗೆ, ಅನುದಾನ ನೀಡುವ ಬಗ್ಗೆ ಹೆಚ್ಚು ಒತ್ತು ನೀಡಲು ಸಿಂಗ್ ಸೂಚಿಸಲಿದ್ದಾರೆ. ಪಕ್ಷ, ಸರ್ಕಾರ ಮತ್ತು ಶಾಸಕರ ಮಧ್ಯೆ ಸಮನ್ವಯಕ್ಕೆ ಹೆಚ್ಚಿನ ಆಗ್ಯತೆ ನೀಡುವ ಸಾಧ್ಯತೆಯೂ ಇದೆ. ಈ ಕಾರಣಕ್ಕಾಗಿ ಬೆಂಗಳೂರಿಗೆ ಕಾಲಿಟ್ಟ ಕ್ಷಣದಿಂದಲೂ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ವಿಚಾರ ಬಿ.ವೈ.ವಿಜಯೇಂದ್ರ ಅವರು ದೆಹಲಿ ಭೇಟಿಯ ಸಂದರ್ಭದಲ್ಲೂ ಕೇಳಿ ಬಂದಿತ್ತು. ಬಳಿಕ ಆ ವಿಚಾರ ತಣ್ಣಗಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಭಿನ್ನರ ಗುಂಪಿನ ಶಾಸಕರೊಬ್ಬರು, ‘ಇದು ನಮಗೆಲ್ಲರಿಗೂ ಮೂಗಿಗೆ ತುಪ್ಪ ಸವರಿ ಸುಮ್ಮನಾಗಿಸುವ ತಂತ್ರವಲ್ಲದೇ ಬೇರೇನೂ ಅಲ್ಲ. ನಾವು ನಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.
ರಾಜ್ಯಗಳ ಸಮಸ್ಯೆ ಬಗೆಹರಿಸಲು ಒತ್ತು: ಹಲವು ರಾಜ್ಯಗಳಲ್ಲಿ ಪಕ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳು ಉದ್ಭವವಾಗುತ್ತಿರುವುದರಿಂದ ಅವುಗಳನ್ನು ಸರಿಪಡಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಉತ್ತರಪ್ರದೇಶದಲ್ಲೂ ಅಂತಹ ಪ್ರಯತ್ನಗಳು ನಡೆದಿವೆ. ಅಲ್ಲೂ ಕೂಡ ಮುಖ್ಯಮಂತ್ರಿ ಬದಲಿಸಲಾಗುತ್ತದೆ ಎಂಬ ವ್ಯವಸ್ಥಿತ ಪ್ರಚಾರ ನಡೆಯಿತು. ಇಲ್ಲೂ ಕೂಡ ಅಂತಹ ಪ್ರಚಾರ ನಡೆಸಿದೆ. ನಾಯಕತ್ವ ಬದಲಾವಣೆ ಸಾಧ್ಯತೆ ಇಲ್ಲ ಎನ್ನುತ್ತವೆ ಅರುಣ್ಸಿಂಗ್ ಅವರ ಆಪ್ತ ಮೂಲಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.