ಬೆಂಗಳೂರು: ‘ಎರಡು ದಿನ ನಡೆದ ಶಾಸಕರ ಸಭೆಯಲ್ಲಿ ಎಲ್ಲರೂ ಮುಖ್ಯಮಂತ್ರಿ ಬಳಿ ತಮ್ಮ ಮನದಾಳದ ಅಭಿಪ್ರಾಯ ತಿಳಿಸಿದ್ದಾರೆ. ಯಡಿಯೂರಪ್ಪ ನಾಯಕತ್ವದ ಬಗ್ಗೆ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಯಾವುದೇ ವಿಷಯವನ್ನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಯಾರೂ ಕೂಡಾ ಪಕ್ಷ, ಸರ್ಕಾರದ ಬಗ್ಗೆ ಮಾತನಾಡಬಾರದು. ಹಾಗೇನಾದರೂ ಬಹಿರಂಗವಾಗಿ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಆಗಿದೆ’ ಎಂದರು.
‘ಕಳೆದ ವಾರದಿಂದ ನಡೆದಿರುವ ಬೆಳವಣಿಗೆಗಳ ಸಂಪೂರ್ಣ ವರದಿ ಹೈಕಮಾಂಡ್ಗೆ ತಲುಪಿದೆ. ಶಾಸಕರ ಬಗ್ಗೆ ರಾಜ್ಯಮಟ್ಟದಲ್ಲಿ ಶಿಸ್ತು ಕ್ರಮ ಸಾಧ್ಯವಿಲ್ಲ. ಅದೇನಿದ್ದರೂ ಪಕ್ಷದ ರಾಷ್ಟ್ರೀಯ ಘಟಕ ಕ್ರಮಕೈಗೊಳ್ಳಬೇಕು’ ಎಂದೂ ಅಶೋಕ ಹೇಳಿದರು.