ಬೆಂಗಳೂರು: ದೆಹಲಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್ ಆಗುತ್ತಿದ್ದಂತೆ, ಅವರ ಭೇಟಿಗೆ ಸಚಿವ ಸ್ಥಾನ ಆಕಾಂಕ್ಷಿಗಳು ಬರುತ್ತಿದ್ದಾರೆ.
ಆರ್.ಟಿ. ನಗರದಲ್ಲಿರುವ ಬೊಮ್ಮಾಯಿ ಅವರ ಮನೆಗೆ ದೇವದುರ್ಗದ ಶಾಸಕ ಶಿವನಗೌಡ ನಾಯಕ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಅವರು ಭಾನುವಾರ ಬೆಳಿಗ್ಗೆಯೇ ಭೇಟಿ ನೀಡಿದರು.
ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್. ಆರ್. ಸಂತೋಷ್ ಕೂಡಾ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸಂತೋಷ್ ಮಾತನಾಡಿ, ‘ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೆ’ ಎಂದರು.
ಮಾಜಿ ಸಚಿವರಾದ ಬಿ.ಸಿ. ಪಾಟೀಲ, ವಿ. ಸೋಮಣ್ಣ ಕೂಡಾ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಬೊಮ್ಮಾಯಿ ಅವರನ್ನು ವಿನಯ್ ಗುರೂಜಿ ಭೇಟಿ ಮಾಡಿದರು. ಬಳಿಕ ಮಾತನಾಡಿದ ವಿನಯ್ ಗುರೂಜಿ, ‘ಶುಭ ಹಾರೈಸಲು ಬಂದಿದ್ದೆ ಅಷ್ಟೇ. ಅವರು ಮುಖ್ಯಮಂತ್ರಿ ಆಗಿರುವುದು ಖುಷಿ ನೀಡಿದೆ. ಅವರು ಈ ಹಿಂದೆ ಗೃಹ ಸಚಿವ ಆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಅವರಿಗೆ ಕಷ್ಟ ಆಗಲ್ಲ’ ಎಂದರು.
ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಕಾವೇರಿಯಲ್ಲಿ ಭೇಟಿ ಮಾಡಿದ ಬೊಮ್ಮಾಯಿ, ಹೈಕಮಾಂಡ್ ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಗ್ಗೆ ಸಮಾಲೋಚನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.