ಬೆಂಗಳೂರು: ‘ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಂಡರೆ ಮನುವಾದಿ ಬಿಜೆಪಿಗೆ ಅವ್ಯಕ್ತ ಅಸೂಯೆ ಮತ್ತು ದ್ವೇಷವಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯವರು ಸಂವಿಧಾನವನ್ನು ಬದಲಿಸುತ್ತೇವೆ. ಸಂವಿಧಾನ ಬರೆದದ್ದು ಅಂಬೇಡ್ಕರ್ ಅಲ್ಲ. ಎನ್ನುವ ಮೂಲಕ ತಮ್ಮ ದ್ವೇಷವನ್ನು ಹೊರಹಾಕುತ್ತಾರೆ’ ಎಂದು ಆರೋಪಿಸಿದೆ.
‘ಮನುಸ್ಮೃತಿಯನ್ನು ಸುಟ್ಟ ಬಾಬಾ ಸಾಹೇಬರು ಮನುವಾದದ ವಕ್ತಾರರಾದ ಆರ್ಎಸ್ಎಸ್ ಮತ್ತು ಬಿಜೆಪಿಗೆ ಯಾವಾಗಲೂ ನುಂಗಲಾಗದ ಬಿಸಿತುಪ್ಪ’ ಎಂದಿದೆ.
‘ನಾವು ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎನ್ನುತ್ತಾರೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ, ‘ಅಂಬೇಡ್ಕರ್ ಬರೆದ ಸಂವಿಧಾನ ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ನಾಯಕ ಗೋವರ್ಧನ್ ಹೇಳುತ್ತಾರೆ. ಕೋಮುವಾದಿ ಬಿಜೆಪಿಗೆ ಮನುಸ್ಮೃತಿ ಹೇರಲು ಏಕೈಕ ತಡೆಗೋಡೆ ಬಾಬಾ ಸಾಹೇಬರ ಸಂವಿಧಾನ! ಅದೇ ಕಾರಣಕ್ಕೆ ಅವರನ್ನು ಸದಾ ದ್ವೇಷಿಸುವ ಬಿಜೆಪಿ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಬಿಜೆಪಿ ಅಂಬೇಡ್ಕರ್ ಅವರನ್ನೇ ದೇಶದ್ರೋಹಿ ಎನ್ನುವಂತಹ ನೀಚ ಮಟ್ಟಕ್ಕೆ ಇಳಿದಿದೆ ಎಂದರೆ ಬಾಬಾ ಸಾಹೇಬರ ಮೇಲೆ ಅವರಿಗಿರುವ ದ್ವೇಷ ಅಳೆಯಬಹುದು. ಸಂಸದ ತೇಜಸ್ವಿ ಸೂರ್ಯ ಎನ್ನುವ ತಲೆ ಮಾಸದ ವ್ಯಕ್ತಿ ಅಂಬೇಡ್ಕರ್ ಅವರನ್ನೇ ದೇಶದ್ರೋಹಿ ಎನ್ನುವಂತ ದುರಾಹಂಕಾರ ತೋರಿದ್ದಕ್ಕೆ ಬಿಜೆಪಿ ಕನಿಷ್ಠ ಕ್ಷಮೆಯನ್ನೂ ಕೇಳಲಿಲ್ಲ’ ಎಂದು ಕಾಂಗ್ರೆಸ್ ದೂರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.