ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ, ನೀವು ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ಅವರು ತಿಂದು ಮುಗಿಸುವುದು ಶತಸಿದ್ಧ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕೀಯ ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಡಿಕೆಶಿ ಅವರೇ, ನೀವು ಬರೇ ಇಂತಹ ಮಾತಿನ ಬಾಣ ಎಸೆಯಬೇಕಷ್ಟೇ. ನೀವು ಶ್ರಮ ವಹಿಸಿ ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ತಿಂದು ಮುಗಿಸುವುದು ಶತಸಿದ್ಧ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
‘ತಮ್ಮ ಪರಮಾಪ್ತ ಎಂ.ಬಿ. ಪಾಟೀಲ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ. ಅದೇ ಎಂ.ಬಿ. ಪಾಟೀಲರು ಕೆಪಿಸಿಸಿ ಅಧ್ಯಕ್ಷರನ್ನೇ ಸಾರ್ವಜನಿಕ ವಲಯದಲ್ಲಿ, ಮಾಧ್ಯಮದವರ ಮುಂದೆ ಪ್ರಶ್ನಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಒಂದು ವಾರದಲ್ಲಿ ಎರಡು ಬಾರಿ ದೆಹಲಿ ದಂಡಯಾತ್ರೆ, ಚಿಂತನ ಶಿಬಿರದಲ್ಲಿ ಒಗ್ಗಟ್ಟಿನ ಮಂತ್ರ ಜಪ. ಇಷ್ಟೆಲ್ಲಾ ಆದರೂ ಡಿ.ಕೆ.ಶಿವಕುಮಾರ್ ಅವರಿಗೆ ಹಿರಿಯ ನಾಯಕ ಎಸ್.ಆರ್. ಪಾಟೀಲರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಹಠವೇ ಅಂತಿಮವಾಯಿತು. ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ’ ಎಂದು ಬಿಜೆಪಿ ಟೀಕಿಸಿದೆ.
‘ತಿಹಾರ್ ಜೈಲಿನಿಂದ ದೊಡ್ಡ ಮೆರವಣಿಗೆ ಮಾಡಿಕೊಂಡು ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು ಎರಡು ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿಯನ್ನು ಭರ್ತಿ ಮಾಡಲು ಡಿಕೆಶಿ ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಉಪಾಧ್ಯಕ್ಷರ ಸ್ಥಾನದ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೂಚಿಸಿದ ಹೆಸರುಗಳಿವೆ. ಡಿಕೆಶಿ ಅಷ್ಟೊಂದು ಅಸಹಾಯಕ ಆಗಿದ್ದೇಕೆ. #ಅಸಹಾಯಕಡಿಕೆಶಿ ಹ್ಯಾಷ್ಟ್ಯಾಗ್ ಉಲ್ಲೇಖಿಸಿ ಬಿಜೆಪಿ ಲೇವಡಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.