ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಉಪ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ ಲಾಬಿ ಆರಂಭ

Last Updated 8 ನವೆಂಬರ್ 2020, 21:42 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ, ಸಚಿವ ಸಂಪುಟ ವಿಸ್ತರಣೆಯ ವಿಚಾರ ಮುನ್ನೆಲೆಗೆ ಬಂದಿದೆ.

ಈ ಎರಡೂ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ (ನ.10) ನಡೆಯಲಿದೆ. ಸಿ.ಟಿ.ರವಿ ರಾಜೀನಾಮೆಯಿಂದ ತೆರವಾದ ಸ್ಥಾನವೂ ಸೇರಿದಂತೆ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಅಲ್ಲದೆ, ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬಳಸಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಕೆಲವರು ಲಾಬಿ ಕೂಡ ಆರಂಭಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಎಚ್‌. ವಿಶ್ವನಾಥ್‌ ಮತ್ತು ಆರ್‌. ಶಂಕರ್‌ ಅವರೂ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೀಪಾವಳಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಅದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ.

‘ಸಂಪುಟದಲ್ಲಿ ಕೆಲವರ ಕಾರ್ಯ ವೈಖರಿ ಬಗ್ಗೆ ವರಿಷ್ಠರಿಗೆ ಸಮಾಧಾನವಿಲ್ಲ. ಸರ್ಕಾರದಲ್ಲಿದ್ದೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲೂ ಯಾವ ಕೊಡುಗೆಯೂ ಇಲ್ಲದಿರುವುದನ್ನು ಗಮನಿಸುತ್ತಿದ್ದಾರೆ. ಅಂತಹವರು ಕೈಬಿಡುವ ಬಗ್ಗೆ ವರಿಷ್ಠರು ಸೂಚಿಸಿದರೆ ಮಾತ್ರ ಸಂಪುಟ ಪುನಾರಚನೆ ಆಗಬಹುದು. ಇಲ್ಲವಾದರೆ ವಿಸ್ತರಣೆ ಆಗಬಹುದು. ಯಾವುದೇ ಕೊಡುಗೆ ನೀಡದೇ ದ್ವೀಪದಂತೆ ಇರುವವರನ್ನು ಗಮನಿಸುತ್ತಿದೆ’ ಎಂದು ಮೂಲಗಳು ಹೇಳಿವೆ.

ಆರ್‌.ಆರ್‌.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಅವರ ಜೊತೆ, ಸರ್ಕಾರ ರಚಿಸಲು ಕಾರಣರಾದ ಎಂಟಿಬಿ ನಾಗರಾಜ್‌ ಕೂಡಾ ಸಂಪುಟದಲ್ಲಿ ಸ್ಥಾನ ಸಿಗುವ ಕನಸು ಕಾಣುತ್ತಿದ್ದಾರೆ. ಹಿರಿಯ ಶಾಸಕ ಉಮೇಶ ಕತ್ತಿ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೂ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು.

ಸರ್ಕಾರ ರಚಿಸಲು ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಯಡಿಯೂರಪ್ಪ ಈಗಾಗಲೇ ಮಾತು ನೀಡಿದ್ದಾರೆ. ಉಪ ಚುನಾವಣೆ ನಡೆದ ದಿನವೇ ಕರೆ ಮಾಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಯಡಿಯೂರಪ್ಪ ಅವರು
ಈ ಬಗ್ಗೆ ಪ್ರಸ್ತಾವಿಸಿದ್ದಾರೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT