ಬೆಂಗಳೂರು: ‘ಪಕ್ಷವೊಂದರ ಕೃಪಾಪೋಷಣೆಯಿಂದ ಸಾಹಿತಿಗಳು, ಪ್ರತಿಷ್ಠಾನಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆಂದು ಸಚಿವರು ನೀಡುವ ಹೇಳಿಕೆಯು ಸಾಹಿತಿಗಳ ಅಂತಃಕರಣಕ್ಕೆ ನೋವು ಉಂಟು ಮಾಡಿದೆ’ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
ಭಾನುವಾರ ನಡೆದ ಗಾಯಕ ವೈ.ಕೆ.ಮುದ್ದುಕೃಷ್ಣ –75 ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರವೇ ನಮ್ಮನ್ನು ನಾಮಕರಣ ಮಾಡಿತ್ತು. ಸಚಿವರ ಹೇಳಿಕೆಯಿಂದ ಸಾಹಿತ್ಯ ಲೋಕಕ್ಕೆ ನೋವು, ಹಿಂಸೆಯಾಗಿದೆ. ಅಂಥ ಸಚಿವರಿಗೆ ಮುಖ್ಯಮಂತ್ರಿ ಬುದ್ಧಿ ಹೇಳಲಿ’ ಎಂದು ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಹೇಳಿದರು.
‘ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಯ ಮೇಲೆ ದಾಳಿ ನಡೆದಿರುವುದೂ ಖಂಡನೀಯ. ಭಿನ್ನಾಭಿಪ್ರಾಯ ಬಂದರೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಮನೆ ಹಾಗೂ ವ್ಯಕ್ತಿಗಳ ಮೇಲೆ ದಾಳಿ ನಡೆಸಬಾರದು’ ಎಂದು ಅಭಿಪ್ರಾಯಪಟ್ಟರು.