ಬೆಂಗಳೂರು: ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗೆ ಸದನ ಸಮಿತಿ ರಚಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ನಲ್ಲಿ ಜೆಡಿಎಸ್ ಧರಣಿ ಮುಂದುವರಿಸಿದೆ. ಇದರಿಂದಾಗಿ ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾದ ಬೆನ್ನಲ್ಲೇ ಮುಂದೂಡಿಕೆ ಆಗಿದೆ.
ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಆದರೆ, ಜೆಡಿಎಸ್ ಸದಸ್ಯರು ಧರಣಿ ಅಂತ್ಯಗೊಳಿಸಲಿಲ್ಲ. ಸದನ ಸಮಿತಿ ರಚಿಸಲೇಬೇಕು ಎಂದು ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.
ಇಲಾಖಾ ಅಧಿಕಾರಿಗಳಿಂದ ವರದಿ ಪಡೆದ ಬಳಿಕ ಸದನ ಸಮಿತಿ ರಚನೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮಜಾಯಿಷಿ ನೀಡಿದರು. ಜೆಡಿಎಸ್ ಸದಸ್ಯರು ಒಪ್ಪಲಿಲ್ಲ. ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತು ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಜೆಡಿಎಸ್ ಸದಸ್ಯರ ಬೇಡಿಕೆಯನ್ನು ಬೆಂಬಲಿಸಿದರು.
ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ ಸಭಾಪತಿ, ತಮ್ಮ ಕೊಠಡಿಯಲ್ಲಿ ಮೂರೂ ಪಕ್ಷಗಳ ನಾಯಕರ ಸಭೆ ನಡೆಸುತ್ತಿದ್ದಾರೆ.