ಬದಿಯಡ್ಕ (ಕಾಸರಗೋಡು): ತಲಸ್ಸೇಮಿಯಾದಿಂದ ಬಳಲುತ್ತಿದ್ದ ಏಳು ವರ್ಷದ ಬಾಲೆ ಸಾನ್ವಿಗೆ ಉತ್ತಮ ಚಿಕಿತ್ಸೆ ಕೊಡಿಸುವಲ್ಲಿ ಕುಂಬಡಾಜೆ ಮತ್ತು ಸುತ್ತಮುತ್ತಲ ಗ್ರಾಮದ ಜನರು ಯಶಸ್ವಿಯಾಗಿದ್ದಾರೆ.
ಬಡ ಕುಟುಂಬದ ಸಾನ್ವಿಗೆ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಷನ್) ಚಿಕಿತ್ಸೆಗೆ ಅಗತ್ಯವಿದ್ದ ಅಂದಾಜು ₹ 40 ಲಕ್ಷ ಹಣವನ್ನು ಇಡೀ ಊರಿನ ಜನರು ಒಟ್ಟಾಗಿ ಸಮಿತಿ ರಚಿಸಿಕೊಂಡುಸಂಗ್ರಹಿಸಿದ್ದರು.
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅಸ್ಥಿಮಜ್ಜೆ ಕಸಿ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಾನ್ವಿಗೆ ಆಕೆಯ ಸಹೋದರಿ ಅನುಶ್ರೀ ಅಸ್ಥಿಮಜ್ಜೆ ದಾನ ಮಾಡಿದಳು. ಇದೀಗ ಸಾನ್ವಿ ಸಂಪೂರ್ಣ ಗುಣಮುಖಳಾಗಿದ್ದು, ಭಾನುವಾರ ಊರಿಗೆ ಮರಳುತ್ತಿದ್ದಾಳೆ.