ನವದೆಹಲಿ: ಎಡಪಕ್ಷಗಳು ಆಳ್ವಿಕೆ ನಡೆಸುತ್ತಿರುವ ಕೇರಳ ರಾಜ್ಯವು ಮೂಲಭೂತವಾದಿಗಳ ‘ಸುರಕ್ಷಿತ ತಾಣ’ವಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗುರುವಾರ ಆರೋಪಿಸಿದ್ದಾರೆ.
‘ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹಂತಕರು ಕೇರಳ ನೋಂದಣಿಯ ಬೈಕ್ ಅನ್ನು ಬಳಸಿರುವುದು ಸಾಕ್ಷ್ಯಗಳಿಂದ ಬಹಿರಂಗಗೊಂಡಿದೆ. ಆರೋಪಿಗಳ ಪತ್ತೆಗೆ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಸಹಕಾರ ನೀಡಬೇಕು ಎಂದೂ ಹೇಳಿದ್ದಾರೆ.
‘ಪಿಎಫ್ಐ ಮತ್ತು ಎಸ್ಡಿಪಿಐಯಂತಹ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಮೂಲಭೂತವಾದಿಗಳಿಗೆ ಅಲ್ಲಿ ರಕ್ಷಣೆ ಸಿಗುವುದರಿಂದ ಇಂತಹ ಬರ್ಬರ ಹತ್ಯೆಗಳನ್ನು ನಡೆಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.