ಕಾರವಾರ: 'ಮಳೆ ಬರುವ ಮುನ್ನ ಗುಡುಗು ಮಿಂಚು ಸಹಜ. ಕೆಲ ಹೊತ್ತಿನ ಬಳಿಕ ಎಲ್ಲವೂ ಶಾಂತವಾಗಲಿದೆ' ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ವ್ಯಾಖ್ಯಾನಿಸಿದರು.
'ಬಿಜೆಪಿ ಹಿಂದುತ್ವದ ಅಜೆಂಡಾ ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೆ ರಾಷ್ಟ್ರೀಯತೆ ವಿಚಾರಧಾರೆ ಗಟ್ಟಿಗೊಳಿಸಲು ಎಲ್ಲ ಧರ್ಮ, ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಮೋದಿ ಸೂಚನೆಗೆ ಬದ್ಧರಾಗಿದ್ದೇವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷದ ಸಂಘಟನೆ ಪರಿಣಾಮಕಾರಿಯಾಗಿಸಲು ಜ.21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಲಾಗುವುದು' ಎಂದರು.
'ಜ.2 ರಿಂದ 12ರ ವರೆಗೆ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಎರಡನೇ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಲಿದ್ದು 2 ಕೋಟಿ ಜನರನ್ನು ತಲುಪುವ ಗುರಿ ಇಟ್ಟುಕೊಳ್ಳಲಾಗಿದೆ' ಎಂದು ವಿವರಿಸಿದರು.
'ವಾಹನಗಳಿಗೆ ಅಂಟಿಸಲು ಸ್ಟಿಕ್ಕರ್ ಗಳನ್ನು ಹಂಚಿಕೆ ಮಾಡಲಾಗುವುದು. ಬಿಜೆಪಿಯತ್ತ ಒಲವು ಹೊಂದಿರುವ ಪ್ರತಿಯೊಬ್ಬರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಲಾಗುವುದು. ಬಿಜೆಪಿ ಪರ ಗೋಡೆ ಬರಹಗಳನ್ನು ಬರೆಯಿಸಲಾಗುವುದು' ಎಂದು ವಿವರಿಸಿದರು.
'ವಾಟ್ಸಾಪ್ ಗುಂಪುಗಳ ಮೂಲಕ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಲಾಗುವುದು' ಎಂದು ತಿಳಿಸಿದರು.
ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ವಕ್ತಾರ ನಾಗರಾಜ ನಾಯಕ, ರಾಜೇಂದ್ರ ನಾಯ್ಕ, ಪ್ರಕಾಶ ನಾಯ್ಕ, ಹೂವಾ ಖಂಡೇಕರ ಇದ್ದರು.